ಕೇಂದ್ರ ಸರಕಾರ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ: ಹರೀಶ್ ಕುಮಾರ್
ಉಳ್ಳಾಲ, ಫೆ. 8: ಹಿಂದೂ, ಮುಸ್ಲಿಂ ದರೋಡೆ, ಕೊಲೆ ವಿಚಾರದಲ್ಲಿಯೇ ರಾಜಕೀಯ ನಡೆಸುತ್ತಿರುವ ಬಿಜೆಪಿಯ ಕೇಂದ್ರ ಸರಕಾರ ಜನರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ನಡೆಸುತ್ತಿದೆ. ದೇಶದಲ್ಲಿ ಪ್ರಚಾರಕ್ಕಿಂತ ಹೆಚ್ಚು ಅಪಪ್ರಚಾರ ಮಾಡಿಯೇ ಆಡಳಿತಕ್ಕೆ ಬರುತ್ತಿರುವ ಬಿಜೆಪಿ ಕಾರ್ಯತಂತ್ರವನ್ನು ಜನತೆ ವಿಫಲಗೊಳಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಅವರು ಉಳ್ಳಾ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್, ಹಿಂದುಳಿದ ವರ್ಗಗಳ ವಿಭಾಗ, ಅಲ್ಪಸಂಖ್ಯಾತ ವಿಭಾಗ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ತೊಕ್ಕೊಟ್ಟುವಿನಲ್ಲಿ ಗುರುವಾರ ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಣಿ ಹಗರಣದಲ್ಲಿ ಭ್ರಷ್ಟಾಚಾರ ನಡೆಸಿ ದೇಶದಲ್ಲಿ ಮೊದಲಿಗನಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ. ಭ್ರಷ್ಟಾಚಾರಿಗಳನ್ನು ಬದಿಯಲ್ಲಿ ಕುಳ್ಳಿರಿಸಿ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿವೆ ಅನ್ನುವ ಆರೋಪ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ರಾಜ್ಯ ಸರಕಾರದ ಕುರಿತು ಮಾತನಾಡುವ ನೈತಿಕತೆಯಿಲ್ಲ. ಮದುವೆಯಾದರೂ ಪತ್ನಿಯನ್ನು ಬಿಟ್ಟಿರುವ ಪ್ರಧಾನಿ ಮೋದಿಯವರು ತ್ರಿವಳಿ ತಲಾಖ್ ಬಗ್ಗೆ ಮಾತನಾಡುತ್ತಿದ್ದಾರೆ. ಪತ್ನಿಗೆ ಅಪಘಾತವಾದರೂ ತಲೆಕೆಡಿಸಿಕೊಳ್ಳದೆ ಕಾಳಜಿ ವಹಿಸದ ಪ್ರಧಾನಿ ದೇಶದ ಬಡವರ ಬಗ್ಗೆ ಚಿಂತನೆ ನಡೆಸಲು ಸಾಧ್ಯವೇ ಎಂದರು.
ಹಿಂದಿನ ರಾಜ್ಯ ಸರಕಾರದ ಆಡಳಿತವಿದ್ದಾಗ ಶ್ರಮವಹಿಸಿ ದುಡಿದ ಜನ ಕಾಂಗ್ರೆಸ್ ಆಡಳಿತದಲ್ಲಿ ಕುಳಿತು ಊಟ ಮಾಡಲಿ ಅನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಯಿತು. ಮೊದಲಿಗೆ ಟೀಕಿಸಿದ ಬಿಜೆಪಿಗರು ಇದೀಗ ಕೇಂದ್ರ ಸರಕಾರದ ಯೋಜನೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯುತಿತ್ತು. ಅತಿ ವೇಗವಾಗಿ ನೇತ್ರಾವತಿ ನೂತನ ಸೇತುವೆ ಕಾಮಗಾರಿ ಮುಗಿದಿತ್ತು. ಇದೀಗ ಎನ್ ಡಿ ಎ ಸರಕಾರ ಬಂದ ನಂತರ ಹೆದ್ದಾರಿಯುದ್ದಕ್ಕೂ ಮೇಲ್ಸೇತುವೆ ಕಾಮಗಾರಿಗಳು ಕುಂಠಿತವಾಗಿದೆ. ಜಿಲ್ಲೆಗೆ ಬೆಂಕಿ ಕೊಡುವ ಸಂಸದರು ಮೊದಲಿಗೆ ಮೇಲ್ಸೇತುವೆಯನ್ನು ನಿರ್ಮಿಸುವಲ್ಲಿ ಪ್ರಯತ್ನ ಪಡಲಿ ಎಂದರು.
ಮಂಗಳೂರು ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೆಹರು ಕುಟುಂಬದ ಮೇಲೆ ಆರೋಪಿಸುವ ಬಿಜೆಪಿಯವರು ಒಬ್ಬರಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರು ಇದ್ದಾರೆಯೇ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡ ಸದಾಶಿವ ಉಳ್ಳಾಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಎಸ್.ಕರೀಂ, ಮಂಗಳೂರು ಕ್ಷೇತ್ರ ಉಸ್ತುವಾರಿ ರಾಜಶೇಖರ್ ಕೋಟ್ಯಾನ್, ಮುಖಂಡರುಗಳಾದ ಮರಿಯಮ್ಮ ಥೋಮಸ್, ಯು.ಎಚ್.ಖಾಲಿದ್ ಉಜಿರೆ, ಹುಸೈನ್ ಕುಂಞಿಮೋನು, ಸುರೇಶ್ ಭಟ್ನಗರ, ಅಹ್ಮದ್ ಬಾವಾ ಕೊಟ್ಟಾರ, ಬಾಝಿಲ್ ಡಿಸೋಜ, ಆಲ್ವಿನ್ ಡಿಸೋಜ, ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ಕ್ಲೇರಾ ಕುವೆಲ್ಲೋ, ಉಸ್ಮಾನ್ ಕಲ್ಲಾಪು, ಯು. ಎ ಇಸ್ಮಾಯಿಲ್, ಜಯರಾಮ ಶೆಟ್ಟಿ, ಪಿ.ಎಂ ಕುಂಞಿ, ಮುತ್ತು ಎನ್ ಶೆಟ್ಟಿ, ಇಕ್ಬಾಲ್ ಸಾಮಣಿಗೆ, ಸಲೀಂ ಮೆಘಾ, ವಿಲ್ಫ್ರೆಡ್ ಡಿಸೋಜಾ, ಶ್ರೀನಿವಾಸ ಶೆಟ್ಟಿ, ಭರತೇಶ್ ಅಮೀನ್, ಪದ್ಮಾವತಿ ಪೂಜಾರಿ, ಸಿದ್ದೀಖ್ ತಲಪಾಡಿ, ಜಬ್ಬಾರ್ ಬೋಳಿಯಾರ್, ಕೊಣಾಜೆ ಗ್ರಾ.ಪಂ ಅಧ್ಯಕ್ಷ ಶೌಕತ್ ಆಲಿ, ಮುಹಮ್ಮದ್ ಅಸೈ, ಸಂದೇಶ್ ಶೆಟ್ಟಿ, ಪದ್ಮನಾಭ ಗಟ್ಟಿ, ಬದ್ರುದ್ದೀನ್ ಹರೇಕಳ, ಚಿತ್ರಕಲಾ, ಬಶೀರ್ ಕೊಳಂಗೆರೆ, ಕಿಶೋರ್ ಗಟ್ಟಿ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಉಪಸ್ಥಿತರಿದ್ದರು.
ಮಂಗಳೂರು ಕ್ಷೇತ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಝರ್ ಶಾ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು. ದೇವಕಿ ಉಳ್ಳಾಲ ವಂದಿಸಿದರು.