ಫೆ.11ರಂದು ಹೊನಲು ಬೆಳಕಿನ ಜೋಡುಕರೆ ಕಂಬಳ
ಮಂಗಳೂರು, ಫೆ. 8: ದಿವಂಗತ ಜೆ.ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಅವರ ಸ್ಮರಣಾರ್ಥ ಹೊನಲು ಬೆಳಕಿನ ಆರನೇ ವರ್ಷದ ಜಯ- ವಿಜಯ ಜೋಡುಕರೆ ಕಂಬಳ ಫೆ.11ರಂದು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಮತ್ತು ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಜೆ.ಅನಿಲ್ ಶೆಟ್ಟಿ ಮನ್ಕುತೋಟಗುತ್ತು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸುಮಾರು 200ಕ್ಕೂ ಹೆಚ್ಚು ಜೋಡು ಕೋಣಗಳು ಮತ್ತು ಯಜಮಾನರು ಭಾಗವಹಿಸುವ ನಿರೀಕ್ಷೆ ಇದೆ. ಆರು ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಒಂದು, ಅರ್ಧ ಮತ್ತು ಕಾಲು ಪವನ್ ಚಿನ್ನ ಸಹಿತ ಬಹುಮಾನ ನೀಡಲಾಗುವುದು ಎಂದರು.
ಅಂದು ಬೆಳಗ್ಗೆ ಧಾರ್ಮಿಕ ವಿಧಿವಿಧಾನ ಮೂಲಕ ದೇರೆಬೈಲು ವಿಠಲದಾಸ ತಂತ್ರಿ ಕಂಬಳ ಉದ್ಘಾಟಿಸಲಿದ್ದು, ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಗಣೇಶ ಎಸ್.ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು .ಅನಿಲ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಪದಾಧಿಕಾರಿಗಳಾದ ಕಾರ್ಪೊರೇಟರ್ ಪ್ರವೀಣ್ಚಂದ್ರ ಆಳ್ವ, ನಾಗೇಂದ್ರ ಕುಮಾರ್, ವಿನಯ್ ನಾಯ್ಕಿ ತಲಪಾಡಿ, ಶ್ರೀಧರ್ರಾಜ್ ಶೆಟ್ಟಿ ಕಡೆಕಾರ್, ಯು.ಕರುಣಾಕರ ಶೆಟ್ಟಿ ಜಪ್ಪು ತಾರ್ದೊಲ್ಯ ತರವಾಡುಮನೆ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.