×
Ad

ಗೌಹರ್ ರಝಾರ ಕ್ಷಮೆ ಕೋರಲು ‘ಝೀ ನ್ಯೂಸ್’ ಗೆ ಸೂಚನೆ

Update: 2018-02-10 22:51 IST

ಹೊಸದಿಲ್ಲಿ, ಫೆ.10: ಹೊಸದಿಲ್ಲಿಯಲ್ಲಿ 2016ರ ಮಾರ್ಚ್ 3ರಂದು ನಡೆದಿದ್ದ ವಾರ್ಷಿಕ ‘ಶಂಕರ್ ಶಾದ್ (ಭಾರತ-ಪಾಕ್) ಮುಷಾಯಿರ’ ಕಾರ್ಯಕ್ರಮದಲ್ಲಿ ಪ್ರೊ. ಗೌಹರ್ ರಝಾ ಅವರು ನಡೆಸಿಕೊಟ್ಟ ಕಾವ್ಯ ವಾಚನ ಕಾರ್ಯಕ್ರಮಕ್ಕೆ ‘ಅಫ್ಜಲ್ ಪ್ರೇಮಿ ಗ್ಯಾಂಗ್ ಕಾ ಮುಷಾಯಿರ’ ಎಂದು ಹೆಸರಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ರಝಾ ಅವರ ಕ್ಷಮೆ ಕೋರುವಂತೆ ಝೀ ನ್ಯೂಸ್ ಚಾನೆಲ್‌ಗೆ ಸೂಚನೆ ನೀಡಲಾಗಿದೆ.

ಭಾರತ- ಪಾಕ್ ಸಂಬಂಧವನ್ನು ಸುಧಾರಿಸುವ ಕ್ರಮವಾಗಿ 1954ರಿಂದ ನಡೆಸಿಕೊಂಡು ಬಂದಿರುವ ಮುಷಾಯಿರ ಕಾರ್ಯಕ್ರಮದ ಕಾವ್ಯ ವಾಚನದ ವೀಡಿಯೊ ದೃಶ್ಯಾವಳಿಯನ್ನು ಝೀ ನ್ಯೂಸ್ ಚಾನೆಲ್‌ನಲ್ಲಿ ‘ಅಫ್ಜಲ್ ಪ್ರೇಮಿ ಗ್ಯಾಂಗ್ ಕಾ ಮುಷಾಯಿರ’ ಎಂಬ ಹೆಸರಿನಲ್ಲಿ 2016ರ ಮಾರ್ಚ್ 9ರಿಂದ 12ರವರೆಗೆ ಪ್ರಸಾರ ಮಾಡಲಾಗಿತ್ತು. ಈ ಕಾರ್ಯಕ್ರಮದ ವೀಡಿಯೊ ದೃಶ್ಯಾವಳಿ ಪ್ರಸಾರದ ಸಂದರ್ಭ ಅಫ್ಜಲ್ ಗುರುವಿನ ವಿವಿಧ ಫೋಟೋಗಳು ಹಾಗೂ ಜೆಎನ್‌ಯು ವಿವಿಯಲ್ಲಿ ನಡೆದಿದೆ ಎನ್ನಲಾಗಿರುವ ಕೆಲವು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಕೂಗುತ್ತಿರುವ ಚಿತ್ರಗಳನ್ನೂ ಆಗಿಂದಾಗ್ಗೆ ಪ್ರಸಾರ ಮಾಡಲಾಗುತ್ತಿತ್ತು. ಇದಕ್ಕೆ ಆಕ್ಷೇಪ ಸೂಚಿಸಿದ್ದ ಗೌಹರ್ ರಝಾ ‘ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ’(ಎನ್‌ಬಿಎಸ್‌ಎ)ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಬಿಎಸ್‌ಎ ಝೀ ನ್ಯೂಸ್‌ಗೆ ಕ್ಷಮೆ ಕೋರುವಂತೆ ಹಾಗೂ 1 ಲಕ್ಷ ರೂ. ದಂಡ ತೆರುವಂತೆ ಸೂಚಿಸಿತ್ತು. ಈ ಆದೇಶವನ್ನು ರದ್ದುಗೊಳಿಸಬೇಕೆಂಬ ಮನವಿ ಸಲ್ಲಿಸಿದ್ದ ಝೀ ನ್ಯೂಸ್ ಪರ ವಕೀಲರು, ದೇಶದಲ್ಲಿ ವಾಕ್‌ಸ್ವಾತಂತ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬುದನ್ನು ತೋರಿಸಿಕೊಡಲು ಕಾರ್ಯಕ್ರಮದ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದೇವೆ ಎಂದಿದ್ದರು.

 ಆದರೆ ಈ ಮನವಿಯನ್ನು ತಿರಸ್ಕರಿಸಿದ ಎನ್‌ಬಿಎಸ್‌ಎ , 2018ರ ಫೆ. 16ರಂದು ರಾತ್ರಿ 9 ಗಂಟೆಗೆ ಕ್ಷಮೆ ಯಾಚಿಸುವ ಹೇಳಿಕೆಯನ್ನು ಪ್ರಸಾರ ಮಾಡಬೇಕು. ಅಲ್ಲದೆ ಏಳು ದಿನಗಳೊಳಗೆ 1 ಲಕ್ಷ ರೂಪಾಯಿಯ ದಂಡದ ಮೊತ್ತವನ್ನು ಜಮೆ ಮಾಡಬೇಕು ಹಾಗೂ ತನ್ನ ಬಳಿಯಿದ್ದ ವೀಡಿಯೊವನ್ನು ಅಳಿಸಿ ಹಾಕುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News