ಮೊಗವೀರ ಸಮುದಾಯದ ಸಾಧನೆ ಅದ್ಭುತವಾದದ್ದು: ಕ್ಯಾ.ಗಣೇಶ್ ಕಾರ್ಣಿಕ್

Update: 2018-02-11 10:03 GMT

ಉಳ್ಳಾಲ,ಫೆ.11: ಸ್ವಾತಂತ್ರ್ಯ ನಂತರದ ಸವಾಲನ್ನು ಸ್ವೀಕರಿಸಿದ ಉಳ್ಳಾಲ ಮೊಗವೀರ ಸಮುದಾಯದ ಸಾಧನೆ ನಿಜಕ್ಕೂ ಅದ್ಭುತವಾದುದನ್ನೇ ಸಾಧಿಸಿದೆ.ಸಮುದಾಯ ಸಮೃದ್ಧಿಯಾಗಬೇಕು. ಶೈಕ್ಷಣಿಕವಾಗಿ ಬೆಳೆಯಬೇಕು, ಭಾರತ ಭಾರತವಾಗಿ ಮುಂದುವರಿಯಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

 ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ವಜ್ರಮಹೋತ್ಸವ ಪ್ರಯುಕ್ತ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಬೀಚ್ ಉತ್ಸವ -2018 ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಧವ ಮಂಗಲಶ್ರೀ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ಎಂಬ ಮಾತಿನಂತೆ ನಡೆದ ಮೊಗವೀರ ಸಮಾಜ 47ರ ಸಮಯದಲ್ಲಿ ಇದ್ದಂತಹ ಸವಾಲುಗಳು ಸಮರ್ಥವಾಗಿ ಎದುರಿಸಿ ಜೀವನ ಸಾಗಿಸಿದ್ದರು. ಈಗಿನ ಸವಾಲುಗಳು ಬಹಳಷ್ಟಿದ್ದು ಅದನ್ನು ಅರಿತುಕೊಂಡು ತಮ್ಮ ಶ್ರಮದಾಯಕ ಕುಲಕಸುಬನ್ನು ಮಕ್ಕಳು ಕೂಡಾ ನೆಚ್ಚಿಕೊಳ್ಳುವುದು ಬೇಡ, ಅವರಿಗೆ ಒಂದು ಸುಂದರ ಬದುಕು ಕಟ್ಟಿಕೊಡಬೇಕು ಎಂಬ ನೆಲೆಯಲ್ಲಿ ಅವರಿಗೆ ಇತರ ಕ್ಷೇತ್ರಗಳಲ್ಲೂ ಉದ್ಯೋಗ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಮೊಗವೀರ ಸಮಾಜ ಉತ್ತಮ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಿದೆ. ಅತ್ಯಂತ ಪ್ರಾಮಾಣಿಕವಾಗಿ ಹೇಳುವುದಾದರೆ ರಾಣಿ ಅಬ್ಬಕ್ಕಳ ನಾಡು ಉಳ್ಳಾಲದ ಎಲ್ಲ ಮೊಗವೀರ ಬಂಧುಗಳ ಕೆಚ್ಚು, ಸಾಹಸ, ಎದೆಗಾರಿಕೆಗೆ, ಕ್ರೀಡಾ, ಮನೋಭಾವಕ್ಕೆ, ಶಕ್ತಿ ಸಾಮರ್ಥ್ಯಕ್ಕೆ ನಿಜಕ್ಕೂ ಅಭಿನಂದನೆಗಳು ಎಂದರು.

 ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ಪೂಜಾರಿ ಮತ್ತು ಗುಳಿಗ ಪಾತ್ರಿ ಹರಿಶ್ಚಂದ್ರ ಪೂಜಾರಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಬ್ಲೂಲೈನ್ಸ್ ಫುಡ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಶೌಕತ್ ಶೌರಿ ಬೀಚ್ ಉತ್ಸವಕ್ಕೆ ಚಾಲನೆ ನೀಡಿದರು.

ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್, ಕಾಂಚನ್ ಮೋಟಾರ್ಸ್ ಮಂಗಳೂರಿನ ಮಾಲಕ ಪ್ರಸಾದ್‍ರಾಜ್ ಕಾಂಚನ್, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಅಧ್ಯಕ್ಷ ಕಿರಣ್ ಪುತ್ರನ್, ಜೀವರಕ್ಷಕ ಈಜುಗಾರ ಸಂಘದ ಅದ್ಯಕ್ಷ ಮೋಹನ್ ಪುತ್ರನ್, ಪ್ರವೀಣ್ ಕೋಟ್ಯಾನ್, ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ವಜ್ರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದೇವದಾಸ್ ಪುತ್ರನ್ ಹಾಗೂ ಕೋಶಾ„ಕಾರಿ ಸುನಿಲ್ ಪುತ್ರನ್ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಾಜಿ ಈಜುಗಾರರ ಸಂಘಕ್ಕೆ ಮಾಧವ ಮಂಗಲಶ್ರೀ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವರಕ್ಷಕ ಈಜುಗಾರರ ಸಂಘದ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.

  ವಜ್ರಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪುತ್ರನ್ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಕಾರ್ಯಕ್ರಮ  ನಿರ್ವಹಿಸಿದರು. ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News