×
Ad

​ದ.ಕ ಜಿಲ್ಲೆಯಲ್ಲಿ ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ

Update: 2018-02-16 23:26 IST

ಮಂಗಳೂರು, ಫೆ. 16: ಈ ಬಾರಿಯ ಕರ್ನಾಟಕ ರಾಜ್ಯದ ಬಜೆಟ್ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿಲ್ಲ: ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ದಿಗೆ ಒತ್ತು ನೀಡಿಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ಈ ಬಜೆಟ್‌ಗೆ ಮಹತ್ವ ಇಲ್ಲ. ಇದೊಂದು ಚುನಾವಣಾ ಬಜೆಟ್. ಈ ಬಜೆಟ್ ಜಾರಿಯಾಗುವುದು ಮುಂದೆ ಯಾವ ಪಕ್ಷದ ಆಡಳಿತದಲ್ಲಿ ಸರಕಾರ ಬರುತ್ತದೆ ಎನ್ನುವುದನ್ನು ಹೊಂದಿಕೊಂಡು ಇದೆ. ದ.ಕ ಜಿಲ್ಲೆಯ ಕಾರಾಗೃಹಕ್ಕೆ ಮಾತ್ರ ಅನುದಾನ ನೀಡಿದ್ದಾರೆ ಹೊರತು ಉಳಿದ ಕ್ಷೇತ್ರಗಳ ಬಗ್ಗೆ ಗಮನಹರಿಸಿಲ್ಲ. ಅನುದಾನ ನೀಡಿಲ್ಲ.

- ಸಂಜೀವ ಮಟಂದರೂರು ಜಿಲ್ಲಾ ಬಿಜೆಪಿ ಅಧ್ಯಕ್ಷ.

ಚುನಾವಣಾ ಗಿಮಿಕ್‌ನ ಬಜೆಟ್: ಈ ಬಾರಿಯ ಬಜೆಟ್ ಚುನಾವಣಾ ಗಿಮಿಕ್‌ನ ಬಜೆಟ್ .ಅನುಷ್ಠಾನಗೊಳ್ಳುವ ಬಜೆಟ್ ಅಲ್ಲ. ಪ್ರತಿ ಬಾರಿಯಂತೆ ದಕ್ಷಿಣ ಕನ್ನಡದ ಸಮಸ್ಯೆಗಳ ಬಗ್ಗೆ ಬಜೆಟ್‌ನಲ್ಲಿ ಗಮನಹರಿಸಲಾಗಿಲ್ಲ. ಇಲ್ಲಿನ ರಬ್ಬರ್ ಬೆಳೆಗಾರರು ರಬ್ಬರು ತೋಟಗಳನ್ನು ಕಡಿದು ಹಾಕುತ್ತಿದ್ದಾರೆ. ಕೇರಳದಲ್ಲಿ ಸರಕಾರವೇ ರಬ್ಬರಿಗೆ 70 ರೂ ಸಬ್ಸಿಡಿ ನೀಡುತ್ತದೆ. ಆ ನಿರೀಕ್ಷೆ ಇಲ್ಲಿನ ಬೆಳೆಗಾರರಿಗೂ ಇತ್ತು ಅದು ಹುಸಿಯಾಗಿದೆ. ಸಬಲೀಕರಣದ ಕೆಲಸ ಹಿಂದೆಯೇ ಆಗಬೇಕಿತ್ತು. ರೈತರ ಎಲ್ಲಾ ರೀತಿಯ ಸಾಲಮನ್ನಾ ಮಾಡಲು ಕ್ರಮ ಆಗಲಿಲ್ಲ .ಈ ಬಾರಿ ಬಜೆಟ್ ಘೋಷಣೆ ಜಾರಿಯಾಗುವುದು ಸಂಶಯವಿದೆ.

-ವಿಟ್ಲ ಮುಹಮ್ಮದ್ ಕುಂಞಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ.

ಈ ಬಾರಿಯ ಬಜೆಟ್ ಅತ್ಯುತ್ತಮ ಬಜೆಟ್: ಈ ಬಾರಿಯ ಬಜೆಟ್ ಅತ್ಯುತ್ತಮ ಬಜೆಟ್. ರಾಜ್ಯದಲ್ಲಿ ಇದುವರೆಗೆ ಇ ರೀತಿಯ ಬಜೆಟ್‌ಗಳಲ್ಲಿ ಇದು ಅತ್ಯುತ್ತಮ ಎನ್ನಬಹುದು. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಎಲ್ಲರಿಗೂ ಆದ್ಯತೆ ನೀಡಲಾಗಿದೆ. ಕೃಷಿಕರಿಗೆ ಗರಿಷ್ಠ ಬೆಂಬಲ ನೀಡಲಾಗಿದೆ. ರೈತರ ಸಾಲ ಮನ್ನಾ ಮಾಡುವ ನೀಡಿದ ಭರವಸೆ ಹುಸಿಯಾಗಲಿಲ್ಲ. ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಿರುವುದು, ವಿದ್ಯಾರ್ಥಿ ವೇತನ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿರುವುದು, ಕೃಷಿಕರಿಗೆ ಸಹಾಯವಾಗುವ ಕಡಿಮೆ ಬಡ್ಡಿದರದ ಸಾಲ ಯೋಜನೆ, ಮಹಿಳೆಯರು, ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನರ ನಿರೀಕ್ಷೆಗೆ ಪೂರಕವಾಗಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ದ.ಕ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶವನ್ನು ಗುರುತಿಸಿ ಅನುದಾನ ನೀಡಿರುವುದು, ಜಿಲ್ಲೆಗೂ ಈ ಬಾರಿಯ ಬಜೆಟ್‌ನಲ್ಲಿ ಗಮನ ನೀಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

- ಹರೀಶ್ ಕುಮಾರ್ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.

ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಪ್ರೋತ್ಸಾಹಕ ಬಜೆಟ್: ಈ ಬಾರಿಯ ಬಜೆಟ್ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳ ಬಗ್ಗೆ ಗಮನಹರಿಸಿರುವ ಬಜೆಟ್ ಆಗಿದ್ದು; ಈ (ಎಂಎಸ್‌ಎಂಇ) ವಿಭಾಗದ ಉದ್ಯಮಿಗಳಿಗೆ ಬಡ್ಡಿಯಲ್ಲಿ ಸಬ್ಸಿಡಿಯನ್ನು ನೀಡಿರುವುದು ಉತ್ತಮ ಪ್ರಸ್ತಾಪ. ಕಾರ್ಮಿಕರಿಂದ ನಡೆಯುವ ಕೈಗಾರಿಕೆಗಳಿಗೆ ಹೆಚ್ಚಿನ ಗಮನಹರಿಸುವ ಕೈಗಾರಿಕೆಗಳಿಗೆ ಒತ್ತು ನೀಡುವ ಪ್ರಸ್ತಾಪದಿಂದ ಹೆಚ್ಚಿನ ಯುವ ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ ಇದು ಸರಿಯಾದ ನಿರ್ಧಾರವಾಗಿದೆ. ಹೆಚ್ಚು ಟೌನ್ ಶಿಫ್ ನಿರ್ಮಾಣ, ಗ್ರಾಮೀಣ ಉದ್ಯಮ ವಲಯ, ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಸಹಾಯವಾಗಲಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಬೈಕಂಪಾಡಿ ಕೈಗಾರಿಕಾ ಪ್ರದೇಶ ವನ್ನು ಕೈಗಾರಿಕಾ ಟೌನ್ ಶಿಫ್ ಪ್ರಾಧಿಕಾರವಾಗಿ ಘೋಷಿಸಿದ್ದು, ಈ ಬಾರಿ ಮೂಲಭೂತ ಸೌಕರ್ಯ ಮತ್ತು ಅನುದಾನದ ಸಹಾಯ ನೀಡಬೇಕಾಗಿದೆ.

-ಕೆನರಾ ಪ್ಲಾಸ್ಟಿಕ್ ಉತ್ಫಾದಕರ ಮತ್ತು ಮಾರಾಟಗಾರರ ಎಸೊಸಿಯೇಶನ್‌ನ (ಸಿಪಿಎಂಟಿಎ)ಅಧ್ಯಕ್ಷ ಬಿ.ಎ.ನಝೀರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News