ಶಿವಾಜಿ ಆದರ್ಶ ಎಲ್ಲರಿಗೂ ಮಾದರಿ: ಶೀಲಾ ಶೆಟ್ಟಿ
ಉಡುಪಿ, ಫೆ.19: ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮಹಿಳೆಯ ರಿಗೆ ನೀಡಿದ ಆದ್ಯತೆ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರಲಿದ್ದ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಉಡುಪಿ ಜಿಪಂನ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.
ಸೋಮವಾರ ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಉಡುಪಿ ಇವರ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುವಲ್ಲಿ ಶಿವಾಜಿ ಪಾತ್ರ ಹಿರಿದಾಗಿದ್ದು, ಆಡಳಿತವನ್ನು ಹೇಗೆ ನಿರ್ವಹಿಸಬೇಕು ಎಂಬುವುದನ್ನು ತನ್ನ ಬುದ್ದಿವಂತಿಕೆ, ಧೈರ್ಯ ಮತ್ತು ತಂತ್ರಗಳ ಮೂಲಕ ಶಿವಾಜಿ ತಿಳಿಸಿಕೊಟ್ಟಿದ್ದಾರೆ. ಅವರ ಆಡಳಿತ ವೈಖರಿ, ಶಿಷ್ಠಾಚಾರ, ತಂದೆ ತಾಯಿಗೆ ನೀಡಿದ ಗೌರವ, ಭಾಷೆ ಮತ್ತು ಸಂಸ್ಕೃತಿ ಗೆ ನೀಡಿದ ಕೊಡುಗೆಗಳು ಎಲ್ಲರಿಗೂ ಆದರ್ಶವಾಗಬೇಕು ಎಂದರು.
ನಿಟ್ಟೆ ಡಾ.ಎನ್ಎಸ್ಎಎಂ ಪಿಯು ಕಾಲೇಜಿನ ಉಪನ್ಯಾಸಕಿ ಅಕ್ಷಯ ಗೋಖಲೆ, ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ಕ್ರಾಂತಿ ಪುರುಷರಾದ ಶಿವಾಜಿ, ದೇಶ ನನ್ನದು, ಧರ್ಮ ನನ್ನದು ಎಂಬ ಪರಿಕಲ್ಪನೆ ಯಿಂದ ಹೋರಾಡಿ ಹಿಂದೂ ಸಾಮ್ರಾಜ್ಯ ತಲೆಎತ್ತಿನಿಲ್ಲುವಂತೆ ಮಾಡಿದವರು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ಜಿಲ್ಲಾ ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಸಿ.ನಾಯ್ಕಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಅಧ್ಯಕ್ಷ ಬಡಾನಿಡಿಯೂರು ಕೇಶವ ರಾವ್,ಸುಬಾಷ್ ನಾಯ್ಕ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮ ಸ್ವಾಗತಿಸಿ ದರು. ಸರಕಾರಿ ಪ್ರೌಢಶಾಲೆ ವಳಕಾಡು ಮುಖ್ಯೋಪಾಧ್ಯಾಯಿನಿ ನಿರ್ಮಲ ವಂದಿಸಿದರು. ಶಂಕರದಾಸ್ ಕಾರ್ಯಕ್ರಮ ನಿರೂಪಿಸಿದರು.