‘ಚಿತ್ರ ಗಂಗೆ’ಯ ಯೋಜನಾ ಪತ್ರಿಕೆ ಬಿಡುಗಡೆ
ಉಡುಪಿ, ಫೆ.19: ಹಸಿ ಮಣ್ಣಿನ ಗೋಡೆಗೆ ಕಲ್ಲನ್ನು ಎಸೆದರೆ ಆ ಹಸಿ ಗೋಡೆ ಕಲ್ಲನ್ನು ಕೆಳಕ್ಕೆ ಬಿಡದೆ ಅದನ್ನು ಹೇಗೆ ಹಿಡಿದಿಟ್ಟುಕೊಳ್ಳುವುದೋ ಹಾಗೆಯೇ ಮಕ್ಕಳ ಮನಸ್ಸು ಕೂಡಾ. ಮುಗ್ದ ಮಕ್ಕಳ ಮನಸ್ಸುಗಳಿಗೆ ನೀವು ಏನು ಹೇಳಿಕೊಟ್ಟರೂ ಅದನ್ನು ಬೇಗನೆ ಗ್ರಹಿಸಿಕೊಳ್ಳುತ್ತಾರೆ. ಅದರಂತೆ ಕಾರ್ಯೋನ್ಮುಕ್ತ ರಾಗುತ್ತಾರೆ. ಇಂತಹ ಮಕ್ಕಳನನು ಕೇಂದ್ರವಾಗಿಟ್ಟುಕೊಂಡು ವ್ಯವಸ್ಥೆಗೊಳಿಸಿದ ‘ಚಿತ್ರಗಂಗೆ’ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗವಾಗಬಹುದು ಎಂದು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿಯ ಸೋದೆ ಮಠದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಯೋಜನಾ ಪತ್ರಿಕೆ’ಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.
ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ವ್ಯವಸ್ಥೆ ಪಡಿಸಿದ ‘ಚಿತ್ರಗಂಗೆ’ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗವಾಗಬಹುದು. ಭಾರತೀಯ ನದಿಗಳನ್ನು ಚಿತ್ರಕಲೆಯ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವ ಈ ಕಮ್ಮಟ ಬಹಳ ಅರ್ಥಪೂರ್ಣವಾದುದು ಎಂದು ಸೋದೆ ಶ್ರೀಗಳು ನುಡಿದರು.
ಕಾರ್ಯಕ್ರಮದಲ್ಲಿ ಉದ್ಯಾವರ ವಿ.ವಿ.ಕಲಾ ಶಾಲೆಯ ಗೌರವ ಸಲಹೆಗಾರ ರಾದ ನಾರಾಯಣ ಬಿ.ಕೆ. ಅವರು ಭಾರತೀಯ ನದಿಗಳ ಮಹತ್ವವನ್ನು ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಕಲಾ ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು.
ವಿ.ವಿ.ಕಲಾ ಶಾಲೆಯ ಗೌರವಾಧ್ಯಕ್ಷ ಪದ್ಮನಾಭ ಕಾಮತ್, ಸುಬ್ರಾಯ ಶಾಸ್ತ್ರೀ, ಚಿತ್ರಗಂಗೆ ಚಿತ್ರ ಕಾರ್ಯಾಗಾರ ಸಮಿತಿ ಅಧ್ಯಕ್ಷ ಪ್ರತಾಪ್ ಉದ್ಯಾವರ, ಉಪಾಧ್ಯಕ್ಷರಾದ ವೌನೇಶ್ ಆಚಾರ್ ಪರ್ಕಳ, ಸತೀಶ್ ಕಾಂಚನ್ ಪೊಲಿಪು, ದೀಪಕ್ ಯು., ಸುಹಾಸ್ ಕಿಣಿ, ವಾದಿರಾಜ್ ಆಚಾರ್ ಪರ್ಕಳ, ಮಧುಕರ್ ಶೆಟ್ಟಿ ಹೆಬ್ರಿ ಉಪಸ್ಥಿತರಿದ್ದರು.
‘ಚಿತ್ರ ಗಂಗೆ’ಯ ಯೋಜನಾ ನಿರ್ದೇಶಕ ವಿಶ್ವೇಶ್ವರ ಪರ್ಕಳ ಕಲಾ ಕಮ್ಮಟದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ವರಲಕ್ಷ್ಮೀ ವಂದಿಸಿದರು.