ಉಡುಪಿ: ಸುಗಮ್ಯ ಚುನಾವಣೆಗೆ ಸೂಕ್ತ ಕ್ರಿಯಾಯೋಜನೆ ರೂಪಿಸಲು ಕರೆ
ಉಡುಪಿ, ಫೆ.21: ಚುನಾವಣಾ ಆಯೋಗವು ಪ್ರಸಕ್ತ ಚುನಾವಣೆಯಲ್ಲಿ ಸುಗಮ್ಯ ಚುನಾವಣೆ ಘೋಷವಾಕ್ಯದಡಿ ಜಿಲ್ಲೆಯಲ್ಲಿರುವ ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಮತದಾನ ಮಾಡಲು ಸಹಾಯವಾಗುವಂತೆ ಪೂರಕ ವ್ಯವಸ್ಥೆಗಳನ್ನು ರೂಪಿಸಲು ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ನಿಷ್ಪಕ್ಷ ಸ್ವಯಂಸೇವಕರಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಹಾಗೂ ಲಯನ್ಸ್, ರೋಟರಿ, ರೆಡ್ಕ್ರಾಸ್ ನೆರವಿನೊಂದಿಗೆ ಎನ್ವೈಕೆ ಸಹಯೋಗವನ್ನು ಪಡೆಯಲು ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು.
ಚುನಾವಣಾ ಆಯೋಗದ ಶಿಫಾರಸ್ಸಿನಂತೆ ಜಿಲ್ಲೆಯಲ್ಲಿ ಇರುವ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಅಸ್ವಸ್ಥರಿಗೆ ಮತದಾನ ಸುಲಭವಾಗಿಸಲು ಈಗಾಗಲೇ ಜಿಲ್ಲೆಯಲ್ಲಿ ಆಯಾ ಬೂತ್ಗಳಲ್ಲಿ ಹೆಸರುಗಳನ್ನು ಪಟ್ಟಿ ಮಾಡಿದ್ದು, ಮಾಹಿತಿ ಪಡೆದುಕೊಂಡು ಕಾರ್ಯಗತಗೊಳಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಕಲಚೇತನರಿಗೆ ಸಹಾಯವಾಗುವಂತೆ, ಆಯಾ ಮತಗಟ್ಟೆಗಳಲ್ಲಿ ವೀಲ್ ಚಯರ್, ರ್ಯಾಂಪ್ಗಳನ್ನು ನಿರ್ಮಿಸಲಾಗುವುದು. ಅಂಧ ಮತದಾರರಿಗೆ ಬ್ರೈನ್ಲಿಪಿಯ ಮೂಲಕ ಮತ ಹಾಕಲು ನೆರವಾಗುವ ವ್ಯವಸ್ಥೆಗಳನ್ನು ಮಾಡಲಾಗುವುದು. ಸುಗಮ್ಯ ಚುನಾವಣೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅರ್ಹರಿಗೆ ವಿಶೇಷ ಪಾಸುಗಳನ್ನು ನೀಡಿ ಅವರು ಸರತಿ ಸಾಲಿನಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಂಬಂಧ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಸಭೆ ನಡೆಸಿ ಗೊಂದಲರಹಿತ ಕ್ರಿಯಾ ಯೋಜನೆ ರೂಪಿಸಿ ಎಂದರು. ವಿಶೇಷ ಪೋಲಿಂಗ್ ಬೂತ್ಗಳನ್ನು ಅವಶ್ಯವಿದ್ದಲ್ಲಿ ರಚಿಸಲು ಅವಕಾಶವಿದ್ದು, ಅದಕ್ಕೂ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಜಿಪಂನ ಸಿಇಒ ಶಿವಾನಂದ ಕಾಪಸಿ ಹಾಗೂ ಇತರರು ಉಪಸ್ಥಿತರಿದ್ದರು