ಉಡುಪಿ: ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರ ಕಾರ್ಯನಿರ್ವಹಣೆಗೆ ಅಮಿತ್ ಶಾ ಕೆಂಡ
ಉಡುಪಿ, ಫೆ.21: ರಾಜ್ಯದ ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳಿಗೆ ಸೇರಿದ ಐದು ಜಿಲ್ಲೆಗಳ ಶಕ್ತಿಕೇಂದ್ರಗಳ ಪ್ರಮುಖರ ಕಾರ್ಯನಿರ್ವಹಣೆಯ ಕುರಿತಂತೆ ಕೆಂಡಾಮಂಡಲಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ, ನಿಗದಿತ ಸಮಯದೊಳಗೆ ನಿಮಗೆ ನೀಡಿರುವ ಗುರಿಯನ್ನು ಮುಟ್ಟಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.
ತಾನು ಜಿಗಣೆಯಂಥ ಮನುಷ್ಯನಾಗಿದ್ದು, ಪಕ್ಷ ಕಟ್ಟುವ ವಿಷಯ ಹಾಗೂ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ವಿಷಯದಲ್ಲಿ ನಿರ್ಲಕ್ಷ್ಯ ಹಾಗೂ ನಿಷ್ಕೃಿಯತೆಯನ್ನು ಎಷ್ಟು ಮಾತ್ರಕ್ಕೂ ಸಹಿಸುವುದಿಲ್ಲ ಎಂದು ಅವರು ಶಕ್ತಿ ಕೇಂದ್ರದ ಪ್ರಮುಖರಿಗೆ ಕಟುವಾದ ಎಚ್ಚರಿಕೆಯನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪ್ರತಿಷ್ಠೆಯ ವಿಷಯವಾಗಿರುವ ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳ ಪರಿಶೀಲನೆಗೆ ರಾಜ್ಯಕ್ಕೆ ಆಗಮಿಸಿರುವ ಶಾ, ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣ ದಲ್ಲಿ ಇಂದು ನಡೆದ ರಾಜ್ಯದ ಎರಡು ವಿಭಾಗಗಳ ಐದು ಜಿಲ್ಲೆಗಳ (ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು) ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅವರಿಂದ ಈ ಎಚ್ಚರಿಕೆಯ ಮಾತು ಕೇಳಿಬಂತು.
ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕುರಿತಂತೆ ಪಕ್ಷ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ, ಶಕ್ತಿಕೇಂದ್ರಗಳ ಪ್ರಮುಖರು ತನ್ನ ನಿರೀಕ್ಷೆಯ ಮಟ್ಟಕ್ಕೆ ತಲುಪದ ಬಗ್ಗೆ ಆಕ್ರೋಶಗೊಂಡಿರುವ ಅಮಿತ್ ಶಾ ಅವುಗಳನ್ನು ಕಠಿಣವಾದ ಶಬ್ದಗಳ ಮೂಲಕ ಬಹಿರಂಗಪಡಿಸಿದರು.
ಇನ್ನು ಕೇವಲ ಎರಡು ತಿಂಗಳಲ್ಲಿ ಬರುವ ಕರ್ನಾಟಕ ಚುನಾವಣೆಯನ್ನು ನಾವು ಗೆಲ್ಲಲೇ ಬೇಕಾಗಿದೆ. ನಾನು ರಾಜ್ಯ ಪ್ರವಾಸದಲ್ಲಿ ಕಂಡುಕೊಂಡಂತೆ ಮತದಾರರ ಅಭಿಪ್ರಾಯಗಳೂ ನಮಗೆ ಪೂರಕವಾಗಿಯೇ ಇವೆ. ಚುನಾವಣೆಗೆ ಮುನ್ನವೇ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ, ನಮ್ಮ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಬೇಕಿದೆ. ಈ ದಿಶೆಯಲ್ಲಿ ವಿಶೇಷವಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಇದಕ್ಕಾಗಿ ನೀವು ನಿಮ್ಮ ಕ್ಷೇತ್ರದ ಪ್ರತಿಯೊಬ್ಬ ಮತದಾರನನ್ನು ತಲುಪಬೇಕಿದೆ. ಒಂದು ರಾತ್ರಿ ಗ್ರಾಮದಲ್ಲಿ ಉಳಿದು ಮತದಾರರನ್ನು ಸಂಪರ್ಕಿಸುವ ಯೋಜನೆ ಸ್ಥಿತಿ ಏನಾಯಿತು ಎಂದು ಪ್ರಶ್ನಿಸಿದ ಅವರು, ನಿಮಗೆ ನೀಡಿದ ಮಾ. 3ರ ಗುರಿಯಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದೀರಿ ಎಂದು ಪ್ರಮುಖರನ್ನು ನೇರವಾಗಿ ಪ್ರಶ್ನಿಸಿದರು.
ನಮ್ಮ ವಿರೋಧಿಗಳು ನಡೆಸುವ ಅಪಪ್ರಚಾರಗಳಿಗೆ ನೀವು ಕಿವಿಗೊಡಬೇಡಿ. ಅವುಗಳನ್ನು ನಿರ್ಲಕ್ಷಿಸಿ ಬಿಡಿ. ನಿಮಗೆ ನೀಡಲಾದ ಗುರಿಯನ್ನು ಮುಟ್ಟಲು, ಪಕ್ಷ ನೀಡಿದ ಜವಾಬ್ದಾರಿಗಳನ್ನು ಪರಿಪೂರ್ಣವಾಗಿ ನಿಭಾಯಿಸಲು ಗಮನ ಕೊಡಿ. ಪಕ್ಷದ ಕೆಲಸಗಳನ್ನು ಲಘುವಾಗಿ ಪರಿಗಣಿಸದಂತೆ ಅವರು ಪದೇ ಪದೇ ಎಚ್ಚರಿಕೆಯನ್ನೂ ನೀಡಿದರು.
ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಆದ್ಯತೆ ನೀಡಬೇಕು. ಬೂತ್ ಮಟ್ಟದ ಪ್ರಮುಖರ ಹೆಸರುಗಳ ಪಟ್ಟಿಯನ್ನು ನೀಡುವಂತೆ ನಾನು ರಾಜ್ಯ ಸಮಿತಿಗೆ ಸೂಚಿಸಿದ್ದೆ. ಆದರೆ ರಾಜ್ಯ ನಾಯಕರು ನಿರೀಕ್ಷೆಯಂತೆ ತಮ್ಮ ಕರ್ತವ್ಯ ನಿಭಾಯಿಸಿಲ್ಲ. ಬಳಿಕ ನಾನು ಈ ಬಗ್ಗೆ ಜಿಲ್ಲಾ ಮಟ್ಟದ ನಾಯಕರಿಗೆ ಸೂಚನೆಗಳನ್ನು ನೀಡಿದೆ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ಪಕ್ಷಕ್ಕೆ ರಾಜ್ಯದ ಜನರ ಬೆಂಬಲ ಅತ್ಯುತ್ತಮವಾಗಿದೆ. ಆದರೆ ಪಕ್ಷದ ಕಾರ್ಯಕರ್ತರ ಪ್ರದರ್ಶನ ನಿರೀಕ್ಷೆಯ ಮಟ್ಟಕ್ಕಿಲ್ಲ. ಶಕ್ತಿಕೇಂದ್ರದ ಪ್ರಮುಖರು ಸದಾ ಜನರ ಸಂಪರ್ಕದಲ್ಲಿದ್ದು, ಅವರವರ ಬೂತ್ಗಳಿಗೆ ನಿರಂತರವಾಗಿ ಭೇಟಿ ನೀಡಬೇಕು. ಹಾಗೂ ಬೂತ್ಗಳಲ್ಲಿ ರಾತ್ರಿಯನ್ನು ಕಳೆಯಬೇಕು. ನಾನೀಗ ನೀಡಿದ ಸೂಚನೆಗಳನ್ನು ಮಾ.5ರೊಳಗೆ ಪೂರ್ಣಗೊಳಿಸಬೇಕು. ಬಳಿಕ ಜಿಲ್ಲಾ ನಾಯಕರು ನನಗೆ ಹಾಗೂ ರಾಜ್ಯ ಸಮಿತಿಗೆ ಸಮಗ್ರ ವರದಿ ನೀಡಬೇಕು ಎಂದರು.
ನಮ್ಮ ಅಭ್ಯರ್ಥಿಗಳ ಗೆಲುವಿನಲ್ಲಿ ಬೂತ್ ಮಟ್ಟದ ಕಾರ್ಯ ತುಂಬಾ ಪ್ರಮುಖವಾದುದು. ಪಕ್ಷಕ್ಕೆ ಜನರ ಆಶೀರ್ವಾದದೊಂದಿಗೆ ನಮ್ಮ ಪರವಾಗಿ ಅಲೆ ಮೂಡಿಸಲು ಇದು ಸಹಕಾರಿಯಾಗಲಿದೆ. ಈ ಕ್ಷಣದಿಂದ ಎಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷ ಬಲಪಡಿಸುವ ಕಾರ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಇದರಲ್ಲಿ ಯಾರೇ ಆದರೂ ನಿರ್ಲಕ್ಷ್ಯ ತೋರಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಸಹಿಸುವುದಿಲ್ಲ ಎಂದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರುವ ಅತ್ಯುತ್ತಮ ಅವಕಾಶ ನಮ್ಮ ಮುಂದಿದೆ. ರಾಜ್ಯದಲ್ಲಿ 150ಕ್ಕೂ ಅಧಿಕ ಸೀಟುಗಳನ್ನು ಗೆದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಮುಂದಿನ 50 ವರ್ಷಗಳ ಕಾಲ ನಮ್ಮದೇ ಆಡಳಿತವನ್ನು ನಡೆಸುವ ಗುರಿ ಹಾಕಿಕೊಳ್ಳಬೇಕು. ಯಾವುದೇ ಬೆಲೆ ತೆತ್ತಾದರೂ ರಾಜ್ಯವನ್ನು ನಾವು ಗೆಲ್ಲಬೇಕು. ಇದಕ್ಕಾಗಿ ನೀವು ಕೆಲಸ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ನಾವು ಪ್ರತಿ ಜಿಲ್ಲೆಗೂ ಭೇಟಿ ನೀಡಿ ನಿಮ್ಮಿಂದ ಕೆಲಸ ತೆಗೆಸಿಕೊಳ್ಳುತ್ತೇನೆ. ನಾವು ದುರ್ಬಲವಾಗಿದ್ದ ತ್ರಿಪುರ, ಅಸ್ಸಾಂ ಹಾಗೂ ಉತ್ತರ ಪ್ರದೇಶಗಳಲ್ಲಿ ಬಹುಮತದೊಂದಿಗೆ ಗೆಲ್ಲ ಬಲ್ಲೆವಾದರೆ, ಉತ್ತಮ ಸ್ಥಿತಿಯಲ್ಲಿರುವ ಕರ್ನಾಟಕವನ್ನು ಗೆಲ್ಲಲು ಯಾಕೆ ಸಾಧ್ಯವಾಗುವುದಿಲ್ಲ ಎಂದವರು ಪ್ರಮುಖರನ್ನು ಪ್ರಶ್ನಿಸಿದರು.
ಕಾರ್ಯಕರ್ತರ ಹಾಗೂ ಪ್ರಮುಖರ ಉತ್ಸಾಹ ಹಾಗೂ ಗೆಲ್ಲಲೇಬೇಕೆಂಬ ಛಲ ನಮಗೆ ಆರಾಮದ ಗೆಲುವು ತರಬಹುದಾದರೆ, ಎಲ್ಲವೂ ಅನುಕೂಲಕರ ವಾಗಿರುವ ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂದು ಗಂಭೀರವಾಗಿ ಕೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಬಿಜೆಪಿ ನಾಯಕರಾದ ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಸುನೀಲ್ ಕುಮಾರ್, ಮಟ್ಟಾರು ರತ್ನಾಕರ ಹೆಗ್ಡೆ, ಸಂಜೀವ ಮಠಂದೂರು, ಭಾರತಿ ಶೆಟ್ಟಿ, ಬಿ.ಆರ್.ಸಂತೋಷ್, ಉದಯ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.