ಕೇರಳ ಮಧು ಕೊಲೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಹೋದ ಸೆಹ್ವಾಗ್ ಕ್ಲೀನ್ ಬೌಲ್ಡ್

Update: 2018-02-24 16:20 GMT

ಹೊಸದಿಲ್ಲಿ, ಫೆ. 24 : ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಟ್ವಿಟರ್ ನಲ್ಲಿ ಖ್ಯಾತರಾಗಿರುವ ಸ್ಪೋಟಕ ಬ್ಯಾಟ್ಸ್ ಮ್ಯಾನ್ ವೀರೇಂದ್ರ ಸೆಹವಾಗ್ ಇದರಲ್ಲಿ ಆಗಾಗ ವಿವಾದಕ್ಕೀಡಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಟ್ವೀಟ್ ಗಳನ್ನೇ ಮಾಡುವ ಸೆಹ್ವಾಗ್ ಇದೀಗ ಮತ್ತೆ ಇಂತಹದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 

ಈ ಹಿಂದೆ ಹುತಾತ್ಮ ಯೋಧರೊಬ್ಬರ ಪುತ್ರಿ ಗುರ್ಮೇಹರ್ ಕೌರ್ ನನ್ನ ತಂದೆ ಯುದ್ಧದಿಂದ ಮೃತಪಟ್ಟಿದ್ದು , ಯಾವುದೇ ದೇಶದಿಂದಾಗಿ ಅಲ್ಲ ಎಂಬರ್ಥದ ಟ್ವೀಟ್ ಮಾಡಿದ್ದಕ್ಕೆ ಆಕೆಯ ವಿರುದ್ಧ ಸಂಘ ಪರಿವಾರದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದಿದ್ದರು. ಆಕೆಗೆ ಅತ್ಯಾಚಾರ, ಕೊಲೆ ಬೆದರಿಕೆಗಳೂ ಬಂದಿದ್ದವು. ಆಗ ಆಕೆಯನ್ನೇ ಪರೋಕ್ಷವಾಗಿ ವ್ಯಂಗ್ಯ ಮಾಡುವ ಟ್ವೀಟ್ ಮಾಡಿದ್ದ ಸೆಹ್ವಾಗ್ ಸಂಘ ಪರಿವಾರದ ಪ್ರಶಂಸೆಗೆ ಹಾಗು ಇತರರ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೆ ಸೆಹ್ವಾಗ್ ವಿವಾದದಲ್ಲಿರುವುದು ಅಮಾನವೀಯ ಪ್ರಕರಣವೊಂದಕ್ಕೆ ಧರ್ಮದ ಹಣೆಪಟ್ಟಿ ಹಚ್ಚುವ ಯತ್ನದ ಮೂಲಕ. 

ಇತ್ತೀಚಿಗೆ ಕೇರಳದಲ್ಲಿ ಅಕ್ಕಿ ಕದ್ದ ಎಂಬ ನೆಪದಲ್ಲಿ ಆದಿವಾಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಹತ್ತಕ್ಕೂ ಹೆಚ್ಚು ಮಂದಿ ಸೇರಿ ಚಿತ್ರಹಿಂಸೆ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸುವ ಮೊದಲೇ ಆತ ಪ್ರಾಣಬಿಟ್ಟಿದ್ದ. ಚಿತ್ರಹಿಂಸೆ ನೀಡುವಾಗ ಯುವಕನೊಬ್ಬ ಅಲ್ಲೇ ನಿಂತು ಸೆಲ್ಫಿ ತೆಗೆದು ಅದನ್ನು ಫೇಸ್ ಬುಕ್ ಗೆ ಹಾಕಿದ್ದ.  ಈ ಅಮಾನವೀಯ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು.  ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಇದನ್ನು ಖಂಡಿಸಿದ್ದರು. 
ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್ ಇಡೀ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟಲು ಪ್ರಯತ್ನಿಸಿದ್ದಾರೆ. 

Madhu stole 1 kg rice. A mob of Ubaid , Hussain and Abdul Kareem lynched the poor tribal man to death. This is a disgrace to a civilised society and I feel ashamed that this happens and kuch farak nahi padta. ( ಮಧು ಒಂದು ಕೆಜಿ ಅಕ್ಕಿ ಕದ್ದಿದ್ದಾನೆ. ಉಬೈದ್ , ಹುಸೇನ್ ಹಾಗು ಅಬ್ದುಲ್ ಕರೀಂ ಅವರ ಗುಂಪು ಆ ಬಡ ಆದಿವಾಸಿ ವ್ಯಕ್ತಿಯನ್ನು ಕೊಂದು ಹಾಕಿದ್ದಾರೆ. ಇದು ಇಡೀ ನಾಗರೀಕ ಸಮಾಜಕ್ಕೆ ಕಳಂಕವಾಗಿದೆ. ಇಂತಹದ್ದು ನಡೆಯುತ್ತದೆ ಹಾಗು ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದರೆ ನನಗೆ ನಾಚಿಕೆಯಾಗುತ್ತದೆ ") ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. 

ಸೆಹ್ವಾಗ್ ರ ಈ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಧು ಮೇಲಿನ ಅಮಾನವೀಯ ಹಲ್ಲೆ ಹಾಗು ಆತನ ಸಾವಿನ ಬಗ್ಗೆ ಎಲ್ಲರಿಗೂ ನೋವಿದೆ. ಆದರೆ ಇಡೀ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟಲು ಸೆಹ್ವಾಗ್ ಮಾಡಿರುವ ಪ್ರಯತ್ನಕ್ಕೆ ಎಲ್ಲ ಧರ್ಮೀಯರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ವಿನೋದ್ ದುಆ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು " ನೀವು ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ? ಅಲ್ಲಿದ್ದದ್ದು ಕೇವಲ ಮೂವರು ಮುಸಲ್ಮಾನರಲ್ಲ,  ಹಿಂದೂ , ಕ್ರೈಸರೂ ಆ ತಂಡದಲ್ಲಿದ್ದರು. ಒಟ್ಟು ಹತ್ತಕ್ಕೂ ಹೆಚ್ಚು ಮಂದಿಯಲ್ಲಿ ನಿಮಗೆ ಈ ಮೂರು ಹೆಸರುಗಳು ಮಾತ್ರ ಕಂಡವೇ ? ಈ ಚಮಚಾಗಿರಿಗೆ ನಿಮಗೆ ಬಿಜೆಪಿ ಟಿಕೆಟ್ ಸಿಗಬಹುದು " ಎಂದು ಟೀಕಿಸಿದ್ದಾರೆ. 

" ಅಲ್ಲಿ ಮುರಳಿ, ಮನು, ಮಚ್ಚತನ್ ಎಂಬವರೂ ಇದ್ದರು. ನೀವು ಹೀಗೆ ಬೊಗಳಿದ್ದಕ್ಕೆ ನಿಮಗೆ ಸೂಕ್ತ ಪ್ರತಿಫಲ ಸಿಗಬಹುದು. ಆದರೆ ಹೀಗೆ ಸುಳ್ಳು ಹರಡಬೇಡಿ " ಎಂದು ಓಂ ಪ್ರಕಾಶ್ ಚೌಧರಿ ಎಂಬವರು ಚಾಟಿ ಬೀಸಿದ್ದಾರೆ. 
ಇನ್ನೂ ಹಲವರು ಸೆಹ್ವಾಗ್ ರ ಕೋಮು ಬಣ್ಣ ಹಚ್ಚುವ ಪ್ರಯತ್ನವನ್ನು ಖಂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News