ವಿದ್ಯಾರ್ಥಿಗಳ ಯುವ ಮನಸ್ಸನ್ನು ವಿಷಕಾರಿ ಮಾಡಲಾಗುತ್ತಿದೆ- ಪಟ್ಟಾಬಿರಾಮ ಸೋಮಯಾಜಿ

Update: 2018-02-24 17:21 GMT

ಪುತ್ತೂರು, ಫೆ. 24 : ದೇಶದ ರಾಜಕಾರಣದಲ್ಲಿ ರಾಜಕಾರಣಿಗಳು ಮತಗಳಿಸಲು ಷಡ್ಯಂತ್ರ ಪ್ರಯೋಗ ಮಾಡುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ರಕ್ತ ಹೀರುವ ಜಿಗಣೆಗಳ ತರ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳಂತಹ ತಾಜಾ ಯುವ ಮನಸ್ಸುಗಳನ್ನು ವಿಷಕಾರಿಯನ್ನಾಗಿ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯುವ ವಿದ್ಯಾರ್ಥಿ ಸಮೂಹ ಸರಿಯಾದ ರಾಜಕೀಯ ಪಕ್ಷ, ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ನಮ್ಮ ದೇಶ ಅಧಃತನಕ್ಕೆ ಸಾಗುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅವರು ಹೇಳಿದರು.

ಪುತ್ತೂರಿನ ಮಿನಿ ವಿಧಾನಸೌಧದ ಬಳಿ ಶನಿವಾರ ಸಂಜೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿ ವತಿಯಿಂದ ನಡೆದ "ಸಾಂಸ್ಥಿಕ ದಬ್ಬಾಳಿಕೆಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳ ರಕ್ಷಣೆ ಖಾತ್ರಿಪಡಿಸಿ" ಎಂಬ ಶಿರೋನಾಮೆಯಡಿ ನಡೆದ ವಿದ್ಯಾರ್ಥಿ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ಪ್ರತಿಯೊಂದು ಒಳಿತಿಗೂ ಅಪಾಯ ಕಾದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಎಳೆದು ತರುವ ಮೂಲಕ ಕೊಳಕು ರಾಜಕಾರಣ ಮಾಡಲಾಗುತ್ತಿದೆ. ವಿದ್ಯಾರ್ಥಿ ಯುವ ಸಮೂಹ ಇದನ್ನು ಪ್ರಶ್ನಿಸುವ ಮೂಲಕ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಅಮಿತ್ ಶಾ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದ ಸಂದರ್ಭ ಮಾಧ್ಯಮದವರನ್ನು ಸಾವಿರಾರು ವಿದ್ಯಾರ್ಥಿಗಳ ಎದುರಲ್ಲಿ ಹೊರ ಕಳುಹಿಸಿದ್ದನ್ನು ಖಂಡಿಸಿದ ಪಟ್ಟಾಭಿರಾಮ ಸೋಮಯಾಜಿ ಅವರು ಇದು ವಿದ್ಯಾರ್ಥಿಗಳು ಹಾಗೂ ನಮ್ಮೊಳಗಿನ ಸಂವಾದ. ಈ ವಿಚಾರವಾಗಿ ಪತ್ರಿಕೆಯವರು ಯಾವುದೇ ಪ್ರಶ್ನೆ ಕೇಳುವ, ದಾಖಲಿಸಿಕೊಳ್ಳುವ ಅಗತ್ಯವಿಲ್ಲ ಎಂಬಷ್ಟೇ ಹೇಳುವುದನ್ನು ಬಿಟ್ಟು ಮಾಧ್ಯಮದವರನ್ನು ಹೊರ ಕಳುಹಿಸುವ ಮೂಲಕ ಅವಮಾನಿಸಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯ ಎಲ್ಲಿಯವರೆಗೆ ಮುಟ್ಟಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿಯ ಪ್ರಮುಖ ಮಹಮ್ಮದ್ ತಫ್‌ಸೀರ್ ಅವರು ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಅನೈತಿಕ ಪೊಲೀಸ್ ಗಿರಿ ಮೂಲಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇಂತಹ ಸಾಂಸ್ಥಿಕ ದಬ್ಬಾಳಿಕೆ ಖೇದಕರ ಮತ್ತು ಅಪಾಯಕಾರಿ. ಇದನ್ನು ತಡೆಯಲು ಸಂಘಟಿತ ಪ್ರಯತ್ನಗಳಾಗಬೇಕು ಎಂದರು.

ಯಾವುದೇ ಹತ್ಯೆ ಪ್ರಕರಣಗಳ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡುವ ಅಗತ್ಯವಿದೆ. ಧರ್ಮದ ಹಕ್ಕನ್ನು ಚಲಾಯಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಡುತ್ತಿಲ್ಲ. ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಯಕರು ಎಂಬ ಮಾತು ಸುಳ್ಳಾಗಿದ್ದು, ಇಂದಿನ ವಿದ್ಯಾರ್ಥಿಗಳೇ ಮುಂದಿನ ಕಪಟ ರಾಜಕೀಯ ವ್ಯಕ್ತಿಗಳ ಬಲಿಪಶುಗಳು ಎಂಬಂತಾಗಿದೆ. ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದರು.

ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸರ್, ಎಸ್‌ಡಿಪಿಐ ಮುಖಂಡ ರಿಯಾರ್ ಫರಂಗಿಪೇಟೆ, ಇಎಫ್‌ಐ ಮುಖಂಡ ರಿಜ್ವಾನ್, ಸಿಎಫ್‌ಐ ಜಿಲ್ಲಾಧ್ಯಕ್ಷ ಸಾದಿಕ್, ಸಿಎಫ್‌ಐ ಮುಖಂಡರಾದ ಅತವುಲ್ಲಾ ಪೂಂಜಾಲಕಟ್ಟೆ, ಸಬೀರ್  ರಹ್ಮಾನ್, ಹರ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇಮ್ರಾನ್ ಪಿ.ಜೆ. ಸ್ವಾಗತಿಸಿದರು.ಸಿಎಫ್‌ಐ ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ವಂದಿಸಿದರು. ರಿಯಾರ್ ಕಡಂಬು, ಮುಫಿದಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News