‘ಭಾರತ್ ಮಾತಾ ಕಿ ಜೈ’ ಎನ್ನದವರು ಪಾಕಿಸ್ತಾನಿಯರು: ಬಿಜೆಪಿ ಶಾಸಕರ ವಿವಾದಾತ್ಮಕ ಹೇಳಿಕೆ
ಬಲ್ಲಿಯಾ, ಫೆ. 26: ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗದವರು ಪಾಕಿಸ್ತಾನಿಯರು ಎಂದು ಹೇಳುವ ಮೂಲಕ ಉತ್ತರಪ್ರದೇಶದ ಬೈರಿಯಾದ ಬಿಜೆಪಿ ಶಾಸಕ ಇನ್ನೊಂದು ವಿವಾದಕ್ಕೆ ಒಳಗಾಗಿದ್ದಾರೆ. ಬಲ್ಲಿಯಾದಲ್ಲಿ ಫೆ. 25ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೈರಿಯಾ ಶಾಸಕ ಸುರೇಂದ್ರ ಸಿಂಗ್, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಲು ನಿರಾಕರಿಸುವ ವ್ಯಕ್ತಿಗಳು ಪಾಕಿಸ್ತಾನಿಯರು ಎಂದು ಹೇಳಿದ್ದಾರೆ.
ಸುರೇಂದ್ರ ಸಿಂಗ್ ವಿವಾದಕ್ಕೆ ಒಳಗಾಗುತ್ತಿರುವುದು ಇದು ಮೊದಲನೇ ಸಲ ಏನಲ್ಲ. ಈ ಹಿಂದೆ ಅವರು "2024ರ ವೇಳೆ ಭಾರತ ಹಿಂದೂ ರಾಷ್ಟ್ರವಾಗಲಿದೆ. ಭಾರತ ಒಮ್ಮೆ ಹಿಂದೂ ರಾಷ್ಟ್ರವಾದ ಬಳಿಕ ಹಿಂದೂ ಸಂಸ್ಕೃತಿ ಅನುಸರಿಸುವ ಮುಸ್ಲಿಮರು ಮಾತ್ರ ಇಲ್ಲಿ ವಾಸಿಸಬಹುದು" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವತಾರ ಪುರುಷ ಎಂದು ಹೇಳುವ ಮೂಲಕ ಕೂಡ ಅವರು ವಿವಾದಕ್ಕೆ ಒಳಗಾಗಿದ್ದರು.
ಹಿಂದೂ ಹಾಗೂ ಹಿಂದೂಯೇತರರ ವಿರುದ್ಧ ಮಾತ್ರ ಸಿಂಗ್ ವಾಗ್ದಾಳಿ ನಡೆಸಿಲ್ಲ. ಕಾಂಗ್ರೆಸ್ ಹಾಗೂ ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದರು. ‘‘ರಾಹುಲ್ ಗಾಂಧಿ ಅವರಲ್ಲಿ ಎರಡು ಮೌಲ್ಯಗಳಿವೆ. ಒಂದು ಇಟಲಿಯ ಮೌಲ್ಯ ಹಾಗೂ ಇನ್ನೊಂದು ಭಾರತದ ಮೌಲ್ಯ. ಅವರು ಎಂದಿಗೂ ಭಾರತೀಯ ಚಿಂತನೆಗಳ ಮಾರ್ಗದರ್ಶಕನಾಗಲು ಸಾಧ್ಯವಿಲ್ಲ’’ ಎಂದು ಅವರು ಈ ಹಿಂದೆ ಹೇಳಿದ್ದರು.