×
Ad

ಬ್ರಹ್ಮಾವರ: ಸ್ಥಳದಲ್ಲೇ 206 ಪಡಿತರ ಚೀಟಿ ವಿತರಣೆ

Update: 2018-02-26 20:04 IST

ಬ್ರಹ್ಮಾವರ, ಫೆ.26: ರಾಜ್ಯ ಸರಕಾರ ನುಡಿದಂತೆ ನಡೆಯುತ್ತಿದ್ದು, ಅಧಿಕಾರ ಪಡೆದಾಗಿನಿಂದ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಬಡವರಿಗೆ ಪಡಿತರ ಚೀಟಿ ತಕ್ಷಣ ಲಭ್ಯವಾಗಿಸಲು ಪಡಿತರ ಚೀಟಿಯನ್ನು ಸ್ಥಳದಲ್ಲೇ ಮುದ್ರಿಸಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ಇಂದು ನಡೆದ ‘ಆಹಾರ ಅದಾಲತ್’ ನಲ್ಲಿ ಸ್ಥಳದಲ್ಲೇ 206 ಪಡಿತರ ಚೀಟಿಗಳನ್ನು ವಿತರಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತಿದ್ದರು.

ದನಿ ಇಲ್ಲದವರಿಗೆ ದನಿಯಾಗಿ ಅಧಿಕಾರಕ್ಕೆ ಬಂದ ಬಳಿಕ 18,300 ಕುಟುಂಬ ಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದ್ದು, 820 ಕುಟುಂಬಕ್ಕೆ ಪೋಸ್ಟ್‌ನಲ್ಲಿ ಕಾರ್ಡ್ ತಲುಪಿದೆ. ಹಲವು ಕಾರಣಗಳಿಂದ ಕಾರ್ಡ್ ದೊರಕದವರಿಗೆ ಸ್ಥಳದಲ್ಲೇ ಕಾರ್ಡ್ ವಿತರಿಸಲು ಪೂರಕವಾಗುವಂತೆ ಎರಡನೇ ಹಂತದಲ್ಲಿ ಮತ್ತೆ ಕಾರ್ಡ್ ವಿತರಿಸಲು ಕಾರ್ಯಕ್ರಮ ಆರಂಭಿಸಲಾಗಿದೆ. 2013ರ ಬಳಿಕದ ರೂ. 1,20,000 ದೊಳಗಿನ ಆದಾಯ ಪ್ರಮಾಣ ಪತ್ರದೊಂದಿಗೆ ಆಧಾರ ಕಾರ್ಡ್, ಸಾವಿರ ಚದರ ಅಡಿಯೊಳಗಿನ ಮನೆ ದಾಖಲೆ ನೀಡಿದರೆ ಸ್ಥಳದಲ್ಲೇ ಪಡಿತರ ಚೀಟಿ ವಿತರಿಸಲಾಗುುದು ಎಂದು ಸಚಿವರು ಹೇಳಿದರು.

ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಸಚಿವರು ಖುದ್ದು ಸ್ಥಳದಲ್ಲೇ ಉಪಸ್ಥಿತರಿದ್ದು, ಕಾರ್ಡ್ ವಿತರಣೆ ವ್ಯವಸ್ಥೆಯ ಉಸ್ತುವಾರಿ ವಹಿಸಿದರಲ್ಲದೆ, ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿದರು. ಅಪರಾಹ್ನ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದು ಫಲಾನುಭವಿಗಳಿಗೆ ಕಾರ್ಡ್ ವಿತರಿಸಲು ಸೂಚನೆ ನೀಡಿದರು.

ಪಡಿತರ ಚೀಟಿ ಬಡವರ ಪಾಲಿನ ಭಾಗ್ಯದ ಚೀಟಿಯಾಗಿದ್ದು ಕೇವಲ ಪಡಿತರ ಆಹಾರ ಸಾಮಗ್ರಿಗಳಲ್ಲದೇ, ಇದರಿಂದ ವಾಜಪೇಯಿ ಆರೋಗ್ಯ ಶ್ರೀ, ವಿದ್ಯುತ್ ಸಂಪರ್ಕ ಸಹ ದೊರೆಯಲಿದೆ ಎಂದರು. ಪಡಿತರ ಚೀಟಿ ತಿದ್ದುಪಡಿಯನ್ನು ಇಲ್ಲೇ ಮಾಡಲಾಗುವುದು ಎಂದ ಸಚಿವರು, ಇಂದು ಸಕಾರಣದಿಂದ ಕಾರ್ಡ್ ತಿರಸ್ಕೃತವಾದರೆ ಅಧಿಕಾರಿಗಳು ಕೇಳಿದ ಮಾಹಿತಿ ಯೊಂದಿಗೆ ಮಾರ್ಚ್ 3ರಂದು ಬೋರ್ಡ್ ಹೈಸ್ಕೂಲ್‌ಗೆ ಬಂದರೆ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗುುದು ಎಂದೂ ಸಚಿವರು ಹೇಳಿದರು.

ಹಕ್ಕುಪತ್ರ, ವಸತಿಯಂತಹ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಉಡುಪಿ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ದನ ತೋನ್ಸೆ, ವಾರಂಬಳ್ಳಿ ಗ್ರಾಪಂನ ಅಧ್ಯಕ್ಷ ನವೀನ್ ನಾಯಕ್, ಹಾರಾಡಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು. ಕಂದಾಯ ಅಧಿಕಾರಿ ಲಕ್ಷ್ಮೀ ನಾರಾಯಣ ಭಟ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News