ಹೊಸ ಪ್ರಯೋಗಗಳ ಭರಾಟೆಯಲ್ಲಿ ಮೂಲ ಆಶಯಕ್ಕೆ ಧಕ್ಕೆ: ಪ್ರೊ ಚಿನ್ನಪ್ಪ ಗೌಡ
ಮಂಗಳೂರು, ಫೆ. 26: ಯಕ್ಷಗಾನ ಕಲೆಗೆ ತನ್ನದೇ ಆದ ಚೌಕಟ್ಟು ಇದೆ. ಆದರೆ ಪ್ರಸಕ್ತ ಸನ್ನಿವೇಶಗಳಲ್ಲಿ ಹೊಸ ಪ್ರಯೋಗಗಳ ಭರಾಟೆಯಲ್ಲಿ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ ಖೇದ ವ್ಯಕ್ತಪಡಿಸಿದರು.
ಮಂಗಳೂರು ರಥಬೀದಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಂಘ, ಸಂತ ಆಗ್ನೆಸ್ ಕಾಲೇಜು ಕನ್ನಡ ಸಂಘ, ಡಾ.ಪಿ.ದಯಾನಂದ ಪೈ ಮತ್ತು ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಆಕಾಶವಾಣಿ ಮಂಗಳೂರು ಇವುಗಳ ಸಹಯೋಗದೊಂದಿಗೆ ಆಗ್ನೆಸ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಯಕ್ಷಗಾನ ಪರಂಪರೆ ಮತ್ತು ಪ್ರಯೋಗ: ಇತ್ತೀೀಚಿನ ಒಲವುಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸತನವೆಂದರೆ ಅದೊಂದು ಬೆಳೆಯೇ ಹೊರತು ಕಳೆ ಮತ್ತು ಕಸ ಅಲ್ಲ. ಒಂದೊಂದು ಪ್ರದರ್ಶನವೂ ಹೊಸ ಬೆಳೆಯಾಗಬೇಕು. ಯಕ್ಷಗಾನದ ಬಗ್ಗೆ ಆಸಕ್ತಿ ಇಟ್ಟುಕೊಂಡು ಬರುವವರು ಗಾನ, ನೃತ್ಯ ವೈಭವಗಳನ್ನೇ ಯಕ್ಷಗಾನವೆಂದು ತಿಳಿದರೆ ಹೇಗಾದೀತು? ರಂಗಭೂಮಿ ಚಂದ ಇರಬೇಕೋ ಅಥವಾ ಅರ್ಥವತ್ತಾಗಿರಬೇಕುಎಂಬುದು ಮುಖ್ಯವಾಗುತ್ತದೆ. ಯಕ್ಷಗಾನದ ಆಯಕಟ್ಟಿನಲ್ಲಿರುವವರು ತಮ್ಮ ಜವಾಬ್ದಾರಿಯನ್ನರಿತು ಮುನ್ನಡೆದರೆ ಯಕ್ಷಗಾನ ಮೂಲ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಡಾ.ಚಿನ್ನಪ್ಪಗೌಡ ಅಭಿಪ್ರಾಯಿಸಿದರು.
100 ವರ್ಷಗಳ ಹಿಂದೆ ಮೇಳದ ಸಂಭಾವನೆ 12 ರೀ. ಕಲಾವಿದನಿಗೆ ಎಂಟಾನೆ ಸಂಭಾವನೆ. ಹಾಕಿದ ವೇಷ ವ್ಯತ್ಯಾಸಗೊಂಡರೆ ಕಲಾವಿದ ದಂಡ ತೆರಬೇಕಿತ್ತು. ಕಲೆಯನ್ನು ತಮ್ಮ ಮೂಗಿನ ನೇರಕ್ಕೆ ಮಾಡುವ ಹಾಗಿಲ್ಲ ಎಂಬುದನ್ನು ಹಿರಿಯರು ಮಾಡಿದ್ದರು.ಆದರೆ ಪ್ರಸಕ್ತ ಯಾವ ರೀತಿ ಇದೆ ಎಂಬುದು ಚಿಂತನೆಗಚ್ಚುವ ವಿಚಾರ.ಆದ್ದರಿಂದ ಪ್ರಯೋಗಗಳು ಯಕ್ಷಗಾನದ ಚೌಕಟ್ಟಿನೊಳಗೇ ಆದರೆ ಅದಕ್ಕೊಂದು ಅರ್ಥ ಬರಲು ಸಾಧ್ಯ ಎಂದವರು ಹೇಳಿದರು.
ಟೆಂಟ್ ಮೇಳ ಬಂದಾಗಲೇ ವೈಭವದ ಕಾಲಘಟ್ಟ ಬಂತು ಎಂದು ಯಕ್ಷಗಾನ ವಿದ್ವಾಂಸರು ಎಚ್ಚರಿಸಿದ್ದರು. ಟಿಕೆಟ್ ಪಡೆದು ಆಟ ನೋಡಿ ಅನುಭವಿಸುತ್ತಿದ್ದವರೂ ಇದ್ದರು. ಆದರೆ ರೂ.500 ನೀಡಿ ಗೌರವ ಪ್ರವೇಶ, ವೈಭವದ ಯಕ್ಷಗಾನಗಳು ಚಿಂತನೆಗೀಡು ಮಾಡಿದವು. ಗೌರವ ಮತ್ತು ವೈಭವದ ನಡುವೆ ಕಲಾವಿದರು ಜಾಗರೂಕತೆಯಿಂದ ಇರಬೇಕಾದ್ದು ಅತಿ ಅವಶ್ಯ ಎಂದವರು ಹೇಳಿದರು.
ಯಕ್ಷಗಾನದಲ್ಲಿ ಸುಮಾರು 5 ಸಾವಿರದಷ್ಟು ಪ್ರಸಂಗಗಳ ರಚನೆಯಾಗಿದೆ. 5 ಸಾವಿರದಷ್ಟು ಮಂದಿ ಯಕ್ಷಗಾನದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಬಲ್ಲ ಒಳ್ಳೆಯ ಕಲಾವಿದರಿದ್ದಾರೆ. 40 ತಿರುಗಾಟದ ಮೇಳಗಳಿವೆ. ಅದರ ನೂರರಷ್ಟು ಹವ್ಯಾಸಿ ಯಕ್ಷಗಾನ ಸಂಘಗಳಿವೆ. ಇಷ್ಟೊಂದು ದೀರ್ಘವಾದ ಸಾಹಿತ್ಯದ ಇತಿಹಾಸ ಹೊಂದಿರುವ ಮತುತಿ ಸಾಮಾಜಿಕ ಜಾನಪದ ನೆಲೆಗಳಿಂದ ಚಾಚಿಕೊಂಡ ಕಲೆ ಯಕ್ಷಗಾನ ಎಂದವರು ವಿಶ್ಲೇಷಿಸಿದರು.
ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಆಶಯ ಭಾಷಣ ಮಾಡಿದರು.
ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜೆಸ್ವೀನಾ ಎ.ಸಿ ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್ ಸಿ., ಕನ್ನಡ ಸಂಘದ ಡಾ.ಪ್ರಕಾಶಚಂದ್ರ ಶಿಶಿಲ, ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕಿ ಉಷಾಲತಾ ಎಸ್ ಉಪಸ್ಥಿತರಿದ್ದರು.
ಆಗ್ನೆಸ್ ಕಾಲೇಜಿನ ಕನ್ನಡ ಸಂಘದ ಡಾ.ಸಂಪೂರ್ಣನಂದ ಬಳ್ಕೂರು ಸ್ವಾಗತಿಸಿದರು.