ಮಾ.5ರಿಂದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ಮಾ. 2: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ 22ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಎ.ಪಿ.ಮಾಲತಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಾ. 5ರಿಂದ 7ರವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿತ್ಯಾನಂದ ಮುಂಡೋಡಿಯವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಮಾ. 5ರಂದು ಬೆಳಗ್ಗೆ 9:30ಕ್ಕೆ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆವರಣದಿಂದ ಕನ್ನಡ ಭುವನೇಶ್ವರಿಯ ದಿಬ್ಬಣ ಆರಂಭ ಗೊಳ್ಳಲಿದ್ದು, ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡ ಉದ್ಘಾಟಿಸಲಿದ್ದಾರೆ. ಬಳಿಕ ರಾಷ್ಟ್ರಧ್ವಜಾರೋಹಣ, ಪರಿಷತ್ತಿನ ಧ್ವಜಾರೋಹಣ, ಸಮ್ಮೇಳನದ ಧ್ವಜಾರೋಹಣ ನಡೆಯಲಿದೆ.
ಸಮ್ಮೇಳನವನ್ನು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ವಿವಿ ಕುಲಪತಿ ಪ್ರೊ ಕೆ.ಬೈರಪ್ಪ, ಶಾಸಕ ಎಸ್.ಅಂಗಾರ, ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸುಳ್ಯ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ವಿವಿಧ ಘಟಕಗಳನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ವಿದ್ವತ್ ಸಂಮಾನ ನಡೆಯಲಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಬಳಿಕ ಮಹಿಳಾ ಗೋಷ್ಠಿ ಸಾಹಿತ್ಯ-ಕಲೆ-ಬದುಕು, ಕೃಷಿರಂಗದ ಸವಾಲುಗಳು ಗೋಷ್ಠಿಗಳು ನಡೆಯಲಿದೆ. ಮಾ.6ರಂದು ಸಾಹಿತ್ಯ-ಸಂಸ್ಕೃತಿ ವಿಕಾಸ-ತೌಳವ ಚಿಂತನ, ಕನ್ನಡ ಶಾಲೆಗಳ ಅಭಿವೃದ್ಧಿ ಪರಿಕಲ್ಪನೆ ವಿಚಾರಗೋಷ್ಠಿ, ಕವಿನಮನ: ಶತಮಾನದ ಕವಿ ಮಂದಾರ ಕೇಶವ ಭಟ್, ಯುವ ಕವಿಗೋಷ್ಠಿ, ಸಾಧಕರಿಗೆ ನಮನ, ಸಂವಾದ-ಸಾಹಿತ್ಯದ ಪ್ರೇರಣೆಗಳು, ಸುಬ್ರಹ್ಮಣ್ಯದ ಇತಿಹಾಸ-ಸಾಂಸ್ಕೃತಿಕ ಸಂಪದ, ಕನ್ನಡ ಅನುಷ್ಠಾನ ಗೋಷ್ಠಿಗಳು ನಡೆಯಲಿದೆ.
ಮಾ. 7ರಂದು ಸಾಧಕ ನಮನ: ಸುಳ್ಯ ಶಿಲ್ಪಿ ಡಾ. ಕುರುಂಜಿ ವೆಂಕಟರಮಣ ಗೌಡ, ಮಾಧ್ಯಮ-ಸಾಮಾಜಿಕ ಜವಾಬ್ದಾರಿ ವಿಚಾರಗೋಷ್ಠಿ, ಕವಿಗೋಷ್ಠಿ, ಯಕ್ಷಗಾನ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಮೀಕ್ಷೆ-ಸಂವಾದ, ಡಿವಿಜಿ ಕಗ್ಗ ಕಾವ್ಯವಾಚನ, ಬಹಿರಂಗ ಅಧಿವೇಶನ, ಸಾಧಕರಿಗೆ ಸಮ್ಮಾನ, ಹಾಸ್ಯ ಸಮಯ ಜರಗಲಿದೆ.
ಸಂಜೆ 4.30ಕ್ಕೆ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದ್ದು, ಸಾಹಿತಿ-ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ಣಾಟಕ ಬ್ಯಾಂಕ್ನ ಮಹಾಪ್ರಬಂಧಕ ಚಂದ್ರಶೇಖರ ರಾವ್ ಬಿ. ಅವರು ಗೌರವ ಪುರಸ್ಕಾರ ನೀಡಲಿದ್ದು, ಸಮ್ಮೇಳಾನಾಧ್ಯಕ್ಷೆ ಎ.ಪಿ.ಮಾಲತಿ ಅವರು ಅಧ್ಯಕ್ಷರ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ನ ಗೌರವ ಕಾರ್ಯದರ್ಶಿ ಬಿ.ತಮ್ಮಯ್ಯ, ಗೌರವ ಕೋಶಾಧ್ಯಕ್ಷೆ ಪೂರ್ಣಿಮಾ ರಾವ್, ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.