×
Ad

ಮಂಗಳೂರು: ‘ಮೇಯರ್’ ಸ್ಥಾನಕ್ಕಾಗಿ ಮುಂದುವರಿದ ಮುಸ್ಲಿಮರ ಲಾಬಿ

Update: 2018-03-04 17:41 IST

ಮಂಗಳೂರು, ಮಾ.4: ‘ಹರಿನಾಥ್ ಪಕ್ಷದ ಹಿರಿಯ ಕಾರ್ಯಕರ್ತರು, ಅನುಭವಿ ಕಾರ್ಪೊರೇಟರ್. ಈ ಬಾರಿ ಮೇಯರ್ ಸ್ಥಾನ ಕೊಡದಿದ್ದರೆ ಅವರಿಗೆ ಅನ್ಯಾಯ ಮಾಡಿದಂತೆ. ನಿಮಗೆ ಒಂದು ಅವಧಿಯಲ್ಲಿ ಖಂಡಿತಾ ಮೇಯರ್ ಸ್ಥಾನ ನೀಡುವೆವು. ಆವರೆಗೆ ನೀವು ಕಾಯಬೇಕು’

ಇದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಎರಡು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಿಯೋಗಕ್ಕೆ ನೀಡಿದ್ದ ಭರವಸೆ. ಅದರಂತೆ ಕೊನೆಯ ಅವಧಿಯಲ್ಲಿ ಮೇಯರ್ ಸ್ಥಾನ ಲಭಿಸಬಹುದು ಎಂದು ಮುಸ್ಲಿಮರು ನಂಬಿದ್ದರು. ಆದರೆ, ಸಚಿವ ರಮಾನಾಥ ರೈ ಯಾವಾಗ ತನ್ನ ಆಪ್ತರಲ್ಲಿ ‘ಮುಸ್ಲಿಮರಿಗೆ ಮೇಯರ್ ಸ್ಥಾನ ಕೊಟ್ಟರೆ ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಿದೆ ಎಂದು ಬಿಜೆಪಿಗರು ಆರೋಪಿಸಿ ಅದರ ರಾಜಕೀಯ ಲಾಭ ಪಡೆಯಬಹುದು. ಚುನಾವಣೆಯ ಸಂದರ್ಭ ಇಂತಹ ಅಪಸ್ವರ, ಅಸಮಾಧಾನ ಬೇಡ. ಭಾಸ್ಕರ ಮೊಯ್ಲಿಗೆ ಮೇಯರ್ ಸ್ಥಾನ ಕೊಡೋಣ’ ಎಂದದ್ದೇ ಕಾಂಗ್ರೆಸ್ ಪಕ್ಷದ ಮುಸ್ಲಿಮರು ಸೆಟೆದು ನಿಂತಿದ್ದಾರೆ.

ಶುಕ್ರವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಭೆ ನಡೆಸಿ ‘ಕೊಡುವುದಿದ್ದರೆ ಮುಸ್ಲಿಮರಿಗೆ ಮೇಯರ್ ಕೊಡಲಿ. ಅದರ ಹೊರತು ಮನಪಾದಲ್ಲಿ ಬೇರೆ ಯಾವ ಸ್ಥಾನಮಾನ ಬೇಡ’ ಎಂದು ಆಗ್ರಹಿಸಿದ್ದಾರಲ್ಲದೆ ಸಚಿವರು, ಶಾಸಕರ ಬಳಿ ನಿಯೋಗ ತೆರಳಲು ನಿರ್ಧರಿಸಿತ್ತು.

ಸಭೆಯಲ್ಲಾದ ತೀರ್ಮಾನದಂತೆ ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಉದ್ಯಮಿಗಳ ನಿಯೋಗವೊಂದು ಶನಿವಾರ ಶಾಸಕರಾದ ಜೆ.ಆರ್.ಲೋಬೊ ಮತ್ತು ಮೊಯ್ದಿನ್ ಬಾವ ಅವರನ್ನು ಕಂಡು ಮಾತನಾಡಿದೆ. ಜೆ.ಆರ್. ಲೋಬೊ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಮೊಯ್ದಿನ್ ಬಾವ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

‘ಅದನ್ನೆಲ್ಲಾ ನೀವು ಉಸ್ತುವಾರಿ ಬಳಿ ಚರ್ಚಿಸಿರಿ, ನಾನ್ಯಾಕೆ’ ಎಂದು ಮೊಯ್ದಿನ್ ಬಾವ ಹೇಳಿದಾಗ, ‘ನೀವು ಶಾಸಕರು, ನೀವು ಕೂಡ ಈ ಬಗ್ಗೆ ಉಸ್ತುವಾರಿ ಸಚಿವರ ಬಳಿ ಮಾತುಕತೆ ನಡೆಸಬೇಕು’ ಎಂದು ನಿಯೋಗ ಉತ್ತರಿಸಿತು ಎನ್ನಲಾಗಿದೆ. ಇದರಿಂದ ಅಡಕತ್ತರಿಗೆ ಸಿಲುಕಿದ ಮೊಯ್ದಿನ್ ಬಾವ ‘ನನಗಿಂತ ನೀವೇ ಮಾತನಾಡುವುದು ಉತ್ತಮ’ ಎಂಬರ್ಥದಲ್ಲಿ ಮಾತನಾಡಿದ್ದಾರನ್ನೆಲಾಗಿದೆ.

ಈ ಮಧ್ಯೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಬಳಿ ನಿಯೋಗ ತೆರಳಲು ಮುಸ್ಲಿಮ್ ಮುಖಂಡರು ನಿರ್ಧರಿಸಿದ್ದಾರೆ. ಅಲ್ಲಿ ಸಚಿವ ರೈ ಸ್ಪಂದಿಸದಿದ್ದರೆ ಮುಖ್ಯಮಂತ್ರಿಯ ಬಳಿ ನಿಯೋಗ ತೆರಳಲು ಮುಂದಾಗಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕೊನೆಯ ಅವಧಿಯ ಮೇಯರ್ ಹುದ್ದೆ ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ರೈ ಅಡ್ಡಗಾಲು: ಮುಸ್ಲಿಮರ ಮತದಿಂದಲೇ ಗೆದ್ದೆ ಎಂದು ಹೇಳಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇದೀಗ ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡಲು ಹಿಂದೇಟು ಹಾಕುವ ಬಗ್ಗೆ ಮುಸ್ಲಿಂ ವಲಯದಲ್ಲಿ ಭಾರೀ ಚರ್ಚೆಗೊಳಗಾಗುತ್ತಿವೆ. ಕಾಂಗ್ರೆಸ್ ಪಕ್ಷದ ಮುಸ್ಲಿಮರೇ ಬಹಿರಂಗವಾಗಿ ಸಭೆ ನಡೆಸಿ ಮೇಯರ್ ಸ್ಥಾನ ಕೊಡದಿದ್ದರೆ ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ಪಕ್ಷದ ಹಿರಿಯ ನಾಯಕರಿಗೆ ನುಂಗಲಾರದ ತುಪ್ಪವಾಗಿದೆ.

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ರೈ ಸಹಿತ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡತೊಡಗಿದ್ದು, ‘ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿರುವುದನ್ನು ಈಗಲಾದರೂ ಕಾಂಗ್ರೆಸ್ಸಿನ ಮುಸ್ಲಿಮರು ಅರ್ಥಮಾಡಿಕೊಂಡಿದ್ದೀರಲ್ಲ, ಅಷ್ಟು ಸಾಕು’ ಎಂದು ಸಂದೇಶ ಹರಿದಾಡುತ್ತಿದೆ.

ಹೈಕಮಾಂಡ್ ಒಲೈಕೆ: ಅಂದು ಮುಸ್ಲಿಮರಿಗೆ ಸ್ಥಾನ ಪಕ್ಕಾ ಎಂದಿದ್ದ ಸಚಿವ ರೈ ಈಗ ಭಾಸ್ಕರ ಮೊಯ್ಲಿ ಪರ ಬ್ಯಾಟಿಂಗ್ ಮಾಡಲು ಹೊರಟಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ಖುಷಿ ಪಡಿಸುವ ಉದ್ದೇಶ ಇದೆ ಎನ್ನಲಾಗಿದೆ. ಈ ಹಿಂದೆ ಇದೇ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೂಲಕವೇ ಭಾಸ್ಕರ ಮೊಯ್ಲಿ ಪರ ರೈಗೆ ಸಂದೇಶ ರವಾನಿಸಿದ್ದರೂ ಹರಿನಾಥ್‌ಗೆ ಮೇಯರ್ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಇದೀಗ ವೀರಪ್ಪ ಮೊಯ್ಲಿಯವರನ್ನು ಖುಷಿ ಪಡಿಸಲು ಭಾಸ್ಕರ ಮೊಯ್ಲಿ ಪರ ಬ್ಯಾಟಿಂಗ್ ಮಾಡಲು ಹೊರಟಿರುವುದು ಹಲವರಲ್ಲಿ ಆಶ್ಚರ್ಯ ಹುಟ್ಟಿಸಿವೆ.

ಮೂರನೆ ವ್ಯಕ್ತಿಗೆ ದಕ್ಕೀತೇ?: ಶುಕ್ರವಾರ ನಗರದಲ್ಲಿ ನಡೆದ ಸಭೆಯ ಹಿಂದೆ ಕಾರ್ಪೊರೇಟರ್ ರವೂಫ್‌ರ ಕೈವಾಡವಿದೆ ಎಂದು ಶಂಕಿಸಿರುವ ಕಾಂಗ್ರೆಸ್ಸಿನ ಇತರ ಕಾರ್ಪೊರೇಟರ್‌ಗಳು ರವೂಫ್ ಬದಲು ಮುಹಮ್ಮದ್ ಕುಂಜತ್ತಬೈಲ್ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಇದಕ್ಕೆ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಭಾಸ್ಕರ ಮೊಯ್ಲಿ ಕೂಡ ಸಹಮತ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಮುಸ್ಲಿಮರು ಮತ್ತು ಕಾಂಗ್ರೆಸ್ ಮಧ್ಯೆ ಕರುಳ ಬಳ್ಳಿಯ ಸಂಬಂಧವಿದೆ. ಕಾಂಗ್ರೆಸ್ ಮುಸ್ಲಿಮರಿಗೆ ಅನೇಕ ರೀತಿಯ ಸ್ಥಾನಮಾನ ನೀಡಿದೆ. ಸಾಮಾಜಿಕ ನ್ಯಾಯ ಪಾಲಿಸುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಈ ವಿಷಯದಲ್ಲೂ ಮುಕ್ತ ಮನಸ್ಸು ಹೊಂದಿದ್ದಾರೆ ಎಂದು ನಾನು ಭಾವಿಸುವೆ. ಅದರಂತೆ ಪಾಲಿಕೆಯ ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡುವ ವಿಶ್ವಾಸವಿದೆ. 5 ವರ್ಷದ ಅವಧಿಯಲ್ಲಿ ಒಂದು ಬಾರಿಯಾದರೂ ಮೇಯರ್ ಸ್ಥಾನ ಕೊಡದಿದ್ದರೆ ಭವಿಷ್ಯದಲ್ಲಿ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಬಹುದು.
ಕೆ.ಕೆ.ಶಾಹುಲ್ ಹಮೀದ್, 
ಅಧ್ಯಕ್ಷರು, ದ.ಕ.ಜಿಪಂ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ

ಈ ಬಗ್ಗೆ ನಾನು ಸಚಿವ ರೈ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾವು ನಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿದ್ದೇವೆ. ಅದರಲ್ಲಿ ಜಯಗಳಿಸುವ ವಿಶ್ವಾಸವಿದೆ.
ಎಂ.ಎಸ್.ಮುಹಮ್ಮದ್
ದ.ಕ.ಜಿಪಂ ಪ್ರತಿಪಕ್ಷ ನಾಯಕರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News