×
Ad

ಮುಸ್ಲಿಮರು ಒಗ್ಗಟ್ಟಾಗದಿದ್ದರೆ ರಾಜಕೀಯ ಅಸ್ತಿತ್ವ ಅಸಾಧ್ಯ: ಯಾಸೀನ್ ಮಲ್ಪೆ

Update: 2018-03-04 21:28 IST

ಉಡುಪಿ, ಮಾ. 4: ಮುಸ್ಲಿಮರು ಇಂದು ಈ ದೇಶದಲ್ಲಿ ರಾಜಕೀಯ ಅಸ್ತಿತ್ವ ಇಲ್ಲದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ರಾಜಕೀಯವಾಗಿ ಛಿದ್ರಗೊಂಡು ಬೇಡಿಕೆ ಇಲ್ಲದ ಸಮುದಾಯವಾಗಿ ಮಾರ್ಪಟ್ಟಿದ್ದೇವೆ. ಇದರ ಪರಿಣಾಮ ನಮಗೆ ಕೊಡುವ ಬದಲು ನಮ್ಮಲ್ಲಿ ಇರುವುದನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ನಾವು ಹೋರಾಟ ಮಾಡುವ ದುಸ್ಥಿತಿ ಎದುರಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಎಂಬ ಧ್ಯೇಯವಾಕ್ಯದಡಿಯಲ್ಲಿ ರವಿವಾರ ಉಡುಪಿ ಬೀಡಿನ ಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂಟಪದಲ್ಲಿ ಆಯೋಜಿಸಲಾದ ಏಕತಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮುಸ್ಲಿಮರು ರಾಜಕೀಯವಾಗಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒಂದಾಗದಿದ್ದರೆ ರಾಜಕೀಯ ಅಸ್ತಿತ್ವ ದೊರೆಯಲು ಸಾಧ್ಯವಿಲ್ಲ. ಎಲ್ಲ ರಂಗ ದಲ್ಲೂ ಮುಸ್ಲಿಮರು ಸಬಲೀಕರಣಗೊಳ್ಳುವುದರಿಂದ ಮಾತ್ರ ಈ ದೇಶ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಂಕಷ್ಟದ ಪರಿಸ್ಥಿತಿಯಲ್ಲಿ ನಿರಾಶರಾಗದಿರುವುದು, ಸಂಘಟಿತ ಹೋರಾಟ ಮತ್ತು ಜಗತ್ತನ್ನು ಜಯಿಸುವಂತಹ ಪ್ರೀತಿ ನಮ್ಮಲ್ಲಿ ಇರಬೇಕಾದ ಮುಖ್ಯ ಗುಣ ಗಳು. ಇವುಗಳೊಂದಿಗೆ ಇಸ್ಲಾಮಿನ ಪರಿಚಯ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮತ್ತು ರಾಜಕೀಯ, ಆರ್ಥಿಕ, ಶೈಕ್ಷಣಿಕ ರಂಗಗಳಲ್ಲಿ ಸಬಲೀಕರಣಗೊಳ್ಳುವ ನಿಟ್ಟಿನಲ್ಲಿ ನಾವು ಹೋರಾಟ ಮಾಡಬೇಕಾಗಿದೆ ಎಂದರು.

ದೇಶಪ್ರೇಮದ ಪ್ರಮಾಣಪತ್ರ: ಈ ದೇಶ ಕೇವಲ ಒಂದು ಸಮುದಾಯದ ದೇಶವಲ್ಲ. ಈ ದೇಶಕ್ಕಾಗಿ ನಮ್ಮ ಅನೇಕ ಹಿರಿಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಆದರೆ ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದವರು ಇಂದು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದು ಸ್ವಾತಂತ್ರ ಹೋರಾಟದಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿದ ಮುಸ್ಲಿಮರ ಬಳಿ ದೇಶಪ್ರೇಮದ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಇಂದು ನಮ್ಮನ್ನು ಆಳುವವರಲ್ಲಿ ಭಾವನೆಗಳನ್ನು ಕೆರಳಿಸುವುದು ಮತ್ತು ಉದ್ರೇಕಕಾರಿ ಭಾಷಣ ಮಾಡುವುದು ಬಿಟ್ಟರೆ, ಈ ದೇಶದ ರಚಾನತ್ಮಕ ನಿರ್ಮಾಣ ಕ್ಕಾಗಿ ಯಾವುದೇ ಯೋಜನೆಗಳಿಲ್ಲ. ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸಿ ಪರಸ್ಪರ ಧ್ವೇಷ, ಹಿಂಸೆಯ ಬುನಾದಿಯ ಮೇಲೆ ಅವರು ಈ ದೇಶ ವನ್ನು ಕಟ್ಟುತ್ತಿದ್ದಾರೆ. ಇವರ ನೀತಿಯಿಂದಾಗಿ ದೇಶದ ಅಲ್ಪಸಂಖ್ಯಾತರು, ದಲಿತರು, ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಸಂಕಷ್ಟದಲ್ಲಿ ದೊಡ್ಡ ಪಾಲು ಮುಸ್ಲಿಮರಿಗೆ ಸಿಕ್ಕಿದೆ ಎಂದು ಅವರು ಹೇಳಿದರು.

ಇಂದು ಬಂಡವಾಳಶಾಹಿಗೆ ಸವಾಲು ಒಡ್ಡುವ ವ್ಯವಸ್ಥೆ ಇದ್ದರೆ ಅದು ಇಸ್ಲಾಮ್ ಮಾತ್ರ. ಇದೇ ಭೀತಿಯಿಂದ ಮುಸ್ಲಿಮರನ್ನು ವೈಚಾರಿಕ ಹಾಗೂ ಸೈದ್ಧಾಂತಿಕ ವಾಗಿ ಎದುರಿಸಲು ಸಾಧ್ಯವಿಲ್ಲದ ಶಕ್ತಿಗಳು ಅಕ್ರಮ, ಅನ್ಯಾಯದ ಮೂಲಕ ದಬ್ಬಾಳಿಕೆ ನಡೆಸುತ್ತಿದೆ ಎಂದ ಅವರು, ಭಾರತದಲ್ಲಿ ಇಂದು ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಪೂರ್ವಾಗ್ರಹ ಪೀಡಿತ ಹೊಂದಿರುವ ಸರಕಾರ ಆಡಳಿತ ನಡೆಸುತ್ತಿದೆ. ಘರ್ ವಾಪಾಸಿ, ಲವ್ ಜಿಹಾದ್, ಗೋರಕ್ಷಣೆ ಹೆಸರಿನಲ್ಲಿ ನಮ್ಮ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದರು.

ದ್ವೇಷ ಅಳಿಸಿ, ಪ್ರೀತಿ ಬೆಳೆಸಿ: ಇಸ್ಲಾಮ್ ಅಂದರೆ ಭಯೋತ್ಪಾದನೆ, ಆಕ್ರಮಣಕಾರಿ, ಮೂಲಭೂತವಾದ, ಮಹಿಳೆಯರ ಹಕ್ಕುಗಳನ್ನು ಕಸಿದು ಕೊಳ್ಳುವ ಧರ್ಮ ಎಂಬುದಾಗಿ ಶತ್ರುಗಳು ಪರಿಚಯಿಸುತ್ತಿದ್ದರೆ, ನಾವು ಅದನ್ನು ಕೇಳಿಕೊಂಡು ಮೌನವಾಗಿದ್ದೇವೆ. ಹಾಗಾಗಿ ಜನರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ತುಂಬಿಹೋಗಿದೆ. ಇದರ ಪರಿಣಾಮ ಮುಸ್ಲಿಮ್ ಎಂಬ ಕಾರಣಕ್ಕೆ ಕೊಚ್ಚಿ ಕೊಲೆ ಮಾಡಲಾಗುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮ್ ಯುವಕರನ್ನು ಸುಡಲಾಗುತ್ತಿದೆ ಎಂದು ಯಾಸೀನ್ ಮಲ್ಪೆ ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲಿ ನಾವು ಇಸ್ಲಾಮ್ ಮತ್ತು ಮುಸ್ಲಿಮರನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ. ಆ ಮೂಲಕ ಜನರ ಮನಸ್ಸಿನಲ್ಲಿ ತುಂಬಿರುವ ದ್ವೇಷದ ವಿಷವನ್ನು ಹೊರ ತೆಗೆದು ಪ್ರೀತಿ ಅಮೃತವನ್ನು ಉಣಿಸಬೇಕಾಗಿದೆ. ಅಪಾಯದಲ್ಲಿರುವ ದೇಶದ ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ನಾವು ಹೋರಾಟ ಮಾಡಬೇಕು ಎಂದರು.

ಸಮಾವೇಶವನ್ನು ಇತ್ತಿಹಾದೆ ಮಿಲ್ಲತ್ ಕೌನ್ಸಿಲ್‌ನ ಅಧ್ಯಕ್ಷ ಹಾಗೂ ಅಹ್ಲೆ ಸುನ್ನತ್ ವಲ್ ಜಮಾಅತ್‌ನ ಪ್ರಖ್ಯಾತ ವಿದ್ವಾಂಸ ಅಹ್ಮದ್ ರಝಾ ಖಾನ್ ಅವರ ಮೊಮ್ಮಗ ಮೌಲಾನಾ ತೌಖೀರ್ ರಝಾ ಖಾನ್ ಉದ್ಘಾಟಿಸಿದರು.

ಅಜ್ಮೀರ್‌ನ ಖಾಜಾ ಮೊಹಿನುದ್ದೀನ್ ಚಿಶ್ತಿ ದರ್ಗಾದ ಸಜ್ಜಾದ್ ನಶೀನ್ ವ ದಿವಾನ ಹಝ್ರತ್ ಚಿಶ್ತಿ ದಿವಾನ್ ಸೈಯದ್ ಝೈನುಲ್ ಆಬಿ ದೀನ್, ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಆದತುಲ್ಲಾ ಹುಸೈನಿ, ಜಮೀಯತೆ ಅಹ್ಲೆ ಹದೀಸ್ ಮತ್ತು ಸಲಫಿ ಸಂಘಟನೆಗಳ ವಿದ್ವಾಂಸ ಡಾ.ಶೇಖ್ ಆರ್.ಕೆ.ನೂರ್ ಮದನಿ, ತಬ್ಲೀಗ್ ಜಮಾಅತ್‌ನ ನಾಯಕ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ಮೌಲಾನಾ ಸಜ್ಜಾದ್ ನೋಮಾನಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್, ವಾರ್ತಾಭಾರತಿ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ವಿಚಾರ ಮಂಡಿಸಿದರು.

ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂನ ಮಾಲಕ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಭಟ್ಕಳದ ಮಜ್ಲಿಸ್-ಎ-ಇಸ್ಲಾಹ್-ಓ ತಂಝೀಮ್‌ನ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಮಿಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರೌವೂಫ್ ಪುತ್ತಿಗೆ, ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್‌ನ ಅಧ್ಯಕ್ಷ ಹಾಜಿ ಅಬ್ದುಲ್ಲಾ ನಾವುಂದ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್, ಉಡುಪಿ ಜಿಲ್ಲಾ ಮುಸ್ಲಿಮ್ ರಾಜಕೀಯ ವೇದಿಕೆಯ ಸಂಚಾಲಕ ಹಬೀಬ್ ಅಲಿ ಮುಖ್ಯ ಅತಿಥಿಗಳಾಗಿದ್ದರು.

ಆರಂಭದಲ್ಲಿ ಖ್ಯಾತ ಉರ್ದು ಕವಿ ಅಝೀಝುದ್ದೀನ್ ಅಝೀಝ್ ಬೆಳ್ಗಾಮಿ ಅವರಿಂದ ಶಾಯರಿ ಹಾಡುಗಳು ನಡೆಯಿತು. ಒಕ್ಕೂಟದ ಉಪಾಧ್ಯಕ್ಷ ಅಶ್ಫಾಕ್ ಅಹ್ಮದ್ ಸ್ವಾಗತಿಸಿದರು. ಗಂಗೊಳ್ಳಿಯ ಮೌಲಾನ ಅಬ್ದುಲ್ಲಾ ಖಾಝಿ ಕಿರಾತ್ ಪಠಿಸಿದರು. ಜಿ.ಎಂ.ಶರೀಫ್ ಹಾಗೂ ಶಾಹಿದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದಲ್ಲಿ ಉಡುಪಿ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಮುಸ್ಲಿಮರು ಪಾಲ್ಗೊಂಡಿದ್ದರು. ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭೋಜನ ಮತ್ತು ಉಪಹಾರ, ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಇದಕ್ಕಾಗಿ 300ಕ್ಕೂ ಅಧಿಕ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News