×
Ad

ಸಂಘಪರಿವಾರದೊಂದಿಗೆ ಪಿಎಫ್‌ಐ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲಿಶತನ: ಪಿಎಫ್‌ಐ ರಾಜ್ಯ ಘಟಕ

Update: 2018-03-06 22:16 IST

ಮಂಗಳೂರು, ಮಾ.6: ದೇಶದಲ್ಲಿ ಹಲವಾರು ಬಾಂಬ್ ಸ್ಫೋಟ ಮತ್ತು ಹತ್ಯೆಗಳನ್ನು ನಡೆಸಿ ಭಯೋತ್ಪಾದನೆ ಮಾಡುತ್ತಿರುವ ಆರೆಸ್ಸೆಸ್‌ನೊಂದಿಗೆ ಪಿಎಫ್‌ಐ ಸಂಘಟನೆಯನ್ನು ಗೃಹ ಸಚಿವರು ಹೋಲಿಸಿದ್ದು ಬಾಲಿಶತನದಿಂದ ಕೂಡಿದೆ ಎಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಹೇಳಿದ್ದಾರೆ.

ಒಂದೆಡೆ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಿಜೆಪಿ ಸವಾಲು ಹಾಕುತ್ತಿರುವ ವೇಳೆ, ಚುನಾವಣಾ ಅಖಾಡದಲ್ಲೂ ವೈಚಾರಿಕವಾಗಿಯೂ ವಿರೋಧಿಸುವುದರಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತಿದೆ. 70 ವರ್ಷಗಳಿಂದ ಓಟು ಬ್ಯಾಂಕ್ ಆಗಿದ್ದ ಮುಸ್ಲಿಮರು ಮತ್ತು ದಲಿತರು ಇದೀಗ ಕಾಂಗ್ರೆಸ್‌ನಿಂದ ದೂರ ನಿಂತಿದ್ದಾರೆ. ತನ್ನ ಮತದಾರರನ್ನು ವಿಶ್ವಾಸಕ್ಕೂ ತೆಗೆದುಕೊಳ್ಳಲೂ ಸಾಧ್ಯವಾಗದ ಕಾಂಗ್ರೆಸ್‌ನ ಹತಾಶೆಯು ಗೃಹ ಸಚಿವರಿಂದ ಇಂತಹ ಮಾತನ್ನು ಹೇಳಿಸುತ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಓಟ್‌ಬ್ಯಾಂಕ್ ಆಗಿದ್ದ ಮುಸ್ಲಿಮರಿಂದು ಕಾಂಗ್ರೆಸ್‌ನ ಸ್ವಯಂ ಕೃತಾಪರಾಧಗಳ ಕಾರಣಗಳಿಂದ ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ ಮತ್ತು ದೇಶದಲ್ಲಿ ಮುಸ್ಲಿಮರೇ ಹುಟ್ಟು ಹಾಕಿದ ರಾಜಕೀಯ ಪಕ್ಷಗಳು ಮುಂಚೂಣಿಗೆ ಬರುತ್ತಿವೆ.
ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಗಲಭೆಗಳನ್ನು ಸೃಷ್ಟಿಸಲು ಆಜ್ಞಾಪಿಸಿದ್ದರೆಂದು ಖುದ್ದು ಸಂಸದ ಪ್ರತಾಪ ಸಿಂಹ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಗಲಭೆಯ ಫ್ಯಾಕ್ಟರಿ ಎಲ್ಲಿದೆ ಎಂಬುದನ್ನು ಗೃಹ ಸಚಿವರು ತಿಳಿದುಕೊಳ್ಳಬೇಕು.

ಬಿಜೆಪಿ, ಆರೆಸ್ಸೆಸ್‌ನಿಂದ ರಾಜ್ಯದಲ್ಲಿ ಗಲಭೆ ಸೃಷ್ಟ್ಟಿಯಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿ ಈ ಹಿಂದೆ ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ವಸ್ತುಸ್ಥಿತಿಯನ್ನು ಗ್ರಹಿಸಲು ಸಾಧ್ಯವಾಗುವ ಸಿದ್ದರಾಮಯ್ಯರಂತಹ ನೇತಾರರ ಕಾರಣದಿಂದ ಮಾತ್ರವೇ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ. ಕಲಬುರ್ಗಿ ಮತ್ತು ಗೌರಿಯ ಹತ್ಯೆಯ ಹಿಂದೆ ಕೋಮುವಾದಿ ಫ್ಯಾಶಿಸ್ಟ್ ಸಂಘಟನೆಗಳ ಕೈವಾಡ ಸ್ಪಷ್ಟವಾಗಿದೆ. ಇದೀಗ ರಾಜ್ಯದ ಇನ್ನೋರ್ವ ಹೋರಾಟಗಾರನನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ತನಿಖಾ ಸಂಸ್ಥೆಗಳು ಸೂಚನೆ ನೀಡಿವೆ. ಹೀಗಿದ್ದೂ ಅಂತಹ ಭಯೋತ್ಪಾದಕ ಸಂಘಟನೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಗೃಹಮಂತ್ರಿ ಪಿಎಫ್‌ಯನ್ನು ವಿನಾ ಕಾರಣ ಎಳೆದು ತರುತ್ತಿದ್ದಾರೆ. ಸಾಮಾಜಿಕ, ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಜನಪರ ಚಳವಳಿಯನ್ನು ಹಮ್ಮಿಕೊಂಡು ದೇಶದ ಸಾಂವಿಧಾನಿಕ ಮೌಲ್ಯಗಳಾದ ಪ್ರಜಾಸತ್ತೆ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಡಿದು ಹೋರಾಡುತ್ತಿರುವ ಸಂಘಟನೆಯ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಹೊರಿಸುತ್ತಿರುವುದು ಅಕ್ಷಮ್ಯ. ಆದ್ದರಿಂದ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News