ಸಹ್ಯಾದ್ರಿಯಲ್ಲಿ ಗ್ರ್ಯಾಂಡ್ ಫಿನಾಲೆ ಸಹ್ಯಾದ್ರಿ ವಿಝ್ ರಸಪ್ರಶ್ನೆ ಕಾರ್ಯಕ್ರಮ
ಮಂಗಳೂರು, ಮಾ.10: ನಗರದ ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗವು ಸಹ್ಯಾದ್ರಿ ವಿಝ್ ರಸಪ್ರಶ್ನೆ-2018 ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿತು.
ಅಂತರಕಾಲೇಜು ಮಟ್ಟದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಮಂಗಳೂರು, ಉಡುಪಿ, ಕೊಡಗು, ಕಾರವಾರ ಮತ್ತು ಕಾಸರಗೋಡಿನ 50 ಕಾಲೇಜುಗಳ ಸುಮಾರು 7,000 ವಿದ್ಯಾರ್ಥಿಗಳು ಕಾಲೇಜು ಮಟ್ಟದ ಸುತ್ತಿನಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಆಯ್ಕೆಯಾದ 950 ವಿದ್ಯಾರ್ಥಿಗಳು ಸಹ್ಯಾದ್ರಿ ಕ್ಯಾಂಪಸ್ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಚ್ಡಿಎಫ್ಸಿ ಲಿ. ಕರ್ನಾಟಕ ಮತ್ತು ಗೋವಾದ ವಾಣಿಜ್ಯೋದ್ಯಮಿ ಕಾಮಾಕ್ಯ ಪ್ರಸಾದ್ ಅಗರ್ವಾಲ್ ಮತ್ತು ಇವೈ ಅಸೋಸಿಯೇಟ್ಸ್ ಎಲ್ಎಲ್ಪಿ ಹಣಕಾಸು ಖಾತೆ ಲೆಕ್ಕಪರಿಶೋಧನಾ ಸೇವೆಗಳ ನಿರ್ದೇಶಕ ಪ್ರದೀಪ್ ಸುರೇಶ್ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಪ್ರಾಂಶುಪಾಲ ಡಾ. ಉಮೇಶ್ ಎಂ. ಭುಶಿ ಮಾಹಿತಿಯನ್ನೇ ಜ್ಞಾನಕ್ಕೆ ಪರಿವರ್ತಿಸುವ ಅವಕಾಶವನ್ನು ಸಹ್ಯಾದ್ರಿ ಮಾಡಿಕೊಟ್ಟಿದೆ.
ಸಹ್ಯಾದ್ರಿ ವಿಜ್ ರಸಪ್ರಶ್ನೆ 2018ರ ಮುಖ್ಯ ಸಂಯೋಜಕಿ ಪ್ರೊ. ಗಾಯತ್ರಿ ಶೆಟ್ಟಿ ಸ್ವಾಗತಿಸಿದರು. ಎಂಬಿಎ ನಿರ್ದೇಶಕ ಡಾ. ವಿಶಾಲ್ ಸಮರ್ಥ, ಸಹ್ಯಾದ್ರಿ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಸಹ್ಯಾದ್ರಿ ವಿಝ್ ರಸಪ್ರಶ್ನೆ ಸಂಯೋಜಕ ಪ್ರೊ. ರಮೇಶ್ ಕೆ.ಜಿ. ವಂದಿಸಿದರು.
ಜಾಸನ್ ಪಿಂಟೋ ಮತ್ತು ರುನಾ ಪಿಂಟೊ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ರಕ್ಷಿತ್ ಶೆಟ್ಟಿ ಮೊದಲ ಪ್ರಾಥಮಿಕ ಸುತ್ತನ್ನು ನಡೆಸಿದರು. ಅಂತಿಮವಾಗಿ ಗ್ರಾಂಡ್ ಫಿನಾಲೆಗಾಗಿ 6 ತಂಡಗಳನ್ನು ಆಯ್ಕೆ ಮಾಡಲಾಯಿತು. ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಮೋರಲ್ ಆ್ಯಂಡ್ ಸ್ಪಿರಿಚುಯಲ್ ಇನ್ಸ್ಟಿಟ್ಯೂಷನ್ನ ರಾಮಕೃಷ್ಣ ಮತ್ತು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಜ್ ರೈ ಪ್ರಶಸ್ತಿಗಳನ್ನು ನೀಡಿದರು.
ಮಣಿಪಾಲದ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ (25,000ರೂ.) ಮತ್ತು ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ (15,000 ರೂ.) ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (10,000 ರೂ.) ಬಹುಮಾನ ಪಡೆದರು.