ಗಾಂಧೀ ಇಂದಿನ ಯುವಕರಿಗೂ ಮಾದರಿ: ವಿನೀತ್ ರಾವ್
ಉಡುಪಿ, ಮಾ.10: ಗಾಂಧೀಜಿ ನಮ್ಮ ಇಂದಿನ ಯುವಕರಿಗೂ ಒಳ್ಳೆಯ ರೋಲ್ ಮಾಡೆಲ್ ಆಗಿದ್ದಾರೆ. ಅವರ ಸಂದೇಶಗಳು ಯುವ ಶಕ್ತಿಯನ್ನು ತಲುಪುವುದು ಇಂದಿನ ತುರ್ತು ಅಗತ್ಯ ಎಂದು ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ವಿನೀತ್ ರಾವ್ ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಗಾಂಧಿ ಕುರಿತ ಸಾಕ್ಷಚಿತ್ರದ ವೀಕ್ಷಣೆಗೆ ಮುನ್ನ ಮಣಿಪಾಲದ ಬಿಸಿಎಂ ಇಲಾಖೆಯ ಹಾಸ್ಟೆಲ್ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೋಹನ್ದಾಸ್ ಕರಮಚಂದ್ ಗಾಂಧಿ ಮಹಾತ್ಮನಾದ ಕಥೆ ಅವರ ಅಹಿಂಸಾತ್ಮಕ ಹೋರಾಟ. ಪ್ರೀತಿಗಿರುವ ಶಕ್ತಿಯನ್ನು ಇಂದು ಅರಿತು ಅಳವಡಿಸಿ ಕೊಳ್ಳಬೇಕಾದ ಅಗತ್ಯವನ್ನು ಹೇಳಿದ ಅವರು, ಗಾಂಧಿ ಅವರ ಜೀವನವೇ ಸಂದೇಶವಾಗಿತ್ತು. ನಾವಿಲ್ಲಿ ನಮ್ಮ ದೇಶದಲ್ಲಿ ವಯಸ್ಕ ಗಾಂಧಿಯನ್ನು ಹೆಚ್ಚಾಗಿ ಇಳಿವಯಸ್ಸಿನ ಪುತ್ಥಳಿ, ಚಿತ್ರಗಳಲ್ಲಿ ನೋಡಿದ್ದೇವೆ. ಆದರೆ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಹೋರಾಟ ಭಾರತದಲ್ಲಿ ಸತ್ಯಾಗ್ರಹ ಚಳವಳಿ ರೂಪ ತಾಳಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿತು ಎಂದರು.
ಗಾಂಧೀಜಿ ಅವರ ಸಾಮರಸ್ಯದ ಸಂದೇಶ ಸದಾ ಪ್ರಸ್ತುತ. ಸತ್ಯ, ಅಹಿಂಸೆಯ ತಳಹದಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಘರ್ಷಗಳಿಗೆ ಗಾಂಧಿ ಮಾರ್ಗವನ್ನು ಅನುಸರಿಸಿ ಇತ್ಯರ್ಥಗೊಳಿಸಬೇಕು. ಮಾನವತೆಯ ಸುಂದರ ತೋಟದಲ್ಲಿ ನಾವೆಲ್ಲರೂ ಸುಂದರ ಪುಷ್ಪಗಳಾಗಬೇಕು ಎಂದರು.
ಕಾರ್ಕಳ ತಾಲೂಕು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ದಯಾನಂದ ಮಾತನಾಡಿದರು. ಹಾಸ್ಟೆಲ್ ವಾರ್ಡನ್ ಸುಜಾತ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉಸ್ಥಿತರಿದ್ದರು.