ಕೋಟ: ಜ್ಯೂಸ್ನಲ್ಲಿ ಮತ್ತು ಬರೆಸುವ ಪದಾರ್ಥ ನೀಡಿ ಸೊತ್ತು ಕಳವು
ಕೋಟ, ಮಾ.12: ಕಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಜ್ಯೂಸ್ನಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿ ಜ್ಞಾನ ತಪ್ಪಿಸಿ ಕರಿಮಣಿ ಸರ, ಮೊಬೈಲ್ ಕಳವು ಮಾಡಿರುವ ಘಟನೆ ಮಾ.10ರಂದು ಸಂಜೆ ವೇಳೆ ನಡೆದಿದೆ.
ಬಿಲ್ಲಾಡಿ ಗ್ರಾಮದ ನೈಲಾಡಿಯ ಬಾಬು ಮರಕಾಲ ಎಂಬವರ ಪತ್ನಿ ಕವಿತಾ ಪಿ.ನಾಯ್ಕ(52) ಎಂಬವರು ಕಾರ್ಕಳ ತಾಲೂಕಿನ ಪಳ್ಳಿಯಲ್ಲಿ ರುವ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಈ ಹಿಂದೆ ಪ್ರಕರಣವೊಂದರಲ್ಲಿ ಮಂಗಳೂರು ಜೈಲಿನಲ್ಲಿದ್ದಾಗ ಕೌಸಲ್ಯ ಹಾಗೂ ಆಕೆಯ ಸಹೋದರ ವಾಸು ಎಂಬವರ ಪರಿಚಯವಾಗಿತ್ತು.
ಕವಿತಾ ಮಾ.10ರಂದು ಕರ್ತವ್ಯ ಮುಗಿಸಿ ಉಡುಪಿಯಲ್ಲಿರುವಾಗ ಕಾರಿನಲ್ಲಿ ಬಂದ ಕೌಸಲ್ಯ ಹಾಗೂ ವಾಸು ಮನೆಗೆ ಬಿಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದು, ಕೆದೂರು ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಬಳಿ ಕವಿತಾಗೆ ಕುಡಿಯಲು ಜ್ಯೂಸ್ ನೀಡಿದರು. ಜ್ಯೂಸ್ ಕುಡಿದ 10 ನಿಮಿಷದಲ್ಲಿ ಕವಿತಾ ಮೂರ್ಛೆ ತಪ್ಪಿದರೆನ್ನಲಾಗಿದೆ.
ನಂತರ ಕವಿತಾರ ಕುತ್ತಿಗೆಯಲ್ಲಿದ್ದ 18,000 ರೂ. ಮೌಲ್ಯದ ಕರಿಮಣಿ ಸರ, 2 ಸಾವಿರ ರೂ. ಮೌಲ್ಯದ ಮೊಬೈಲ್ ಕಳವು ಮಾಡಿದ ಆರೋಪಿಗಳು, ಸಂಜೆ 7ಗಂಟೆಗೆ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿಯ ಬಸ್ ನಿಲ್ದಾಣದ ಬಳಿ ಆಕೆಯನ್ನು ಇಳಿಸಿ ಪರಾರಿಯಾಗಿದ್ದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕವಿತಾರನ್ನು ಆಕೆಯ ಗಂಡ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.