ಲಿಂಗಾಯತ ಧರ್ಮ ವಿಚಾರ; ರಾಜ್ಯ ಸರಕಾರ ಶಿಫಾರಸ್ಸನ್ನು ಹಿಂಪಡೆಯಲಿ: ಪೇಜಾವರ ಶ್ರೀ ಒತ್ತಾಯ
ಉಡುಪಿ, ಮಾ.19: ಲಿಂಗಾಯತ ಧರ್ಮದ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸ್ಸನ್ನು ಹಿಂಪಡೆಯಬೇಕು. ಇವರಿಗೆ ಮೀಸಲಾತಿ ನೀಡುವ ಮೂಲಕ ದಲಿತರು ಹಾಗೂ ಹಿಂದುಳಿದವರಿಗೆ ಮತ್ತಷ್ಟು ಅನ್ಯಾಯವಾಗಲಿದೆ. ಈ ಶಿಫಾರಸ್ಸನ್ನು ಕೇಂದ್ರ ಸರಕಾರ ಒಪ್ಪಬಾರದು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ವೀರಶೈವ, ಲಿಂಗಾಯತರಲ್ಲಿ ಎಷ್ಟೇ ಮತ ಸಂಪ್ರದಾಯ ಭಿನ್ನಾಭಿಪ್ರಾಯ ಇದ್ದರೂ ಅವೆಲ್ಲರೂ ಒಂದು ಧರ್ಮಕ್ಕೆ ಸೇರಿದವರು. ವೀರಶೈವರು ಮತ್ತು ಲಿಂಗಾಯತರು ಬೇರೆ ಅಲ್ಲ. ಶಿವ, ಪಾರ್ವತಿ ಹಾಗೂ ಪುನರ್ಜನ್ಮವನ್ನು ಯಾರೋ ಒಪ್ಪುತ್ತಾರೆಯೋ ಅವರು ಎಲ್ಲರು ಹಿಂದೂ ಧರ್ಮಕ್ಕೆ ಸೇರಿದವರು. ವೀರಶೈವರು, ಲಿಂಗಾಯತರು ಹಿಂದೂ ಧರ್ಮದಿಂದ ಹೊರ ಹೋಗುವುದಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಪೇಜಾವರ ಶ್ರೀ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಷ್ಣವರು, ಮಧ್ವರು ನಿಜವಾದ ಅಲ್ಪಸಂಖ್ಯಾತರು. ಮುಸ್ಲಿಮರು ಮಾತ್ರ ಈ ದೇಶದಲ್ಲಿ ಬಹುಸಂಖ್ಯಾತರು. ವೀರಶೈವರು, ಲಿಂಗಾಯತರ ನಡುವೆ ನನಗೆ ಅನೇಕ ವರ್ಷದ ಸಂಬಂಧವಿದೆ. ಈ ವಿಚಾರದಲ್ಲಿ ನನಗೆ ಯಾವುದೇ ಸ್ವಾರ್ಥವಿಲ್ಲ. ನಿಪಕ್ಷಪಾತವಾಗಿ ಈ ಹೇಳಿಕೆ ನೀಡುತ್ತಿದ್ದೇನೆ. ಲಿಂಗಾಯತರ, ವೀರಶೈವರು ನಮ್ಮ ಸಹೋದರರು. ಅವರಲ್ಲಿ ಭೇದ ಹುಟ್ಟಿಸುವುದು ಸರಿಯಲ್ಲ. ಇಡೀ ಸಮಾಜವನ್ನು ಒಡೆಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.