ಫರಂಗಿಪೇಟೆ: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಅಭಿಯಾನ
ಫರಂಗಿಪೇಟೆ, ಮಾ. 27: ಇಸ್ಲಾಂ ಸ್ವಚ್ಛತೆಗೆ ಬಹಳಷ್ಟು ಮಹತ್ವವನ್ನು ಕೊಟ್ಟಿದೆ. ಸ್ವಚ್ಛತೆಯು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ) ಸಾರಿದ್ದಾರೆ. ಇದೇ ಸಂದೇಶವನ್ನು ಮದ್ರಸಗಳಲ್ಲಿ ಕಲಿಸಲಾಗುತ್ತಿದೆ. ಮದ್ರಸಗಳಲ್ಲಿ ತಾವು ಮಕ್ಕಳಿಗೆ ಕಲಿಸುವ ಸ್ವಚ್ಛತೆಯ ವಿಷಯವನ್ನು ಮದ್ರಸ ಅಧ್ಯಾಪಕರು ಕಾರ್ಯರೂಪದಲ್ಲಿ ಮಾಡಿತೋರಿಸಿದ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.
ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಇಂದು ಪೂರ್ವಾಹ್ನ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.
ರಾಷ್ಟ್ರೀಯ ಹೆದ್ದಾರಿ 75 ಸಾಗುವ ಫರಂಗಿಪೇಟೆ ಜಂಕ್ಷನ್ಗೆ ಸಮೀಪದಲ್ಲೇ ದಾರಿಹೋಕರು, ಬೈಕ್, ಕಾರುಗಳಲ್ಲಿ ಸಂಚರಿಸುವವರು ತಮ್ಮ ಮನೆಯ ತ್ಯಾಜ್ಯದ ಕಟ್ಟುಗಳನ್ನು ಮಾರ್ಗದ ಬದಿಯಲ್ಲೇ ಎಸೆಯುವುದು ಸಾಮಾನ್ಯವಾಗಿದೆ. ಈ ಸ್ಥಳದಲ್ಲಿ ಪಂಚಾಯತ್ ವತಿಯಿಂದ ಕಸ ಎಸೆಯಬಾರದು ಎಂಬ ಸೂಚನಾ ಫಲಕವಿದ್ದರೂ ಕಸ ಎಸೆಯುವುದು ಮಾಮೂಲಾಗಿದೆ. ಬಹಳಷ್ಟು ಕಸದ ರಾಶಿಯಿಂದ ತುಂಬಿದ್ದ ಜಾಗದಲ್ಲಿ ಮದ್ರಸ ಅಧ್ಯಾಪಕರು ಯಾವುದೇ ಅಸಹ್ಯ ಪಡೆದೆ ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಮನೆಮನೆಗಳಿಂದ ಎಸೆದಿದ್ದ ತ್ಯಾಜ್ಯದ ತೊಟ್ಟೆಗಳನ್ನು ಹೆಕ್ಕಿ ಬುಟ್ಟಿಗೆ ತುಂಬಿಸಿ ಲಾರಿಗೆ ಲೋಡು ಮಾಡಿದರು. ದುರ್ನಾತ ಬೀರುತ್ತಿದ್ದ ಕಟ್ಟುಗಳನ್ನು ಹೆಕ್ಕುವಾಗಲು ಸಹ ಒಂದಿಷ್ಟು ಅಸಹ್ಯ ಪಡದೆ ತುಂಬಾ ಉತ್ಸುಕತೆಯಿಂದ ಭಾಗವಹಿಸುತ್ತಿರುವುದು ಕಂಡು ಬಂತು. ಪ್ರವಾದಿವರ್ಯರು ಏನು ಹೇಳಿದ್ದಾರೆ ಎಂದು ಭಾಷಣ ಮಾಡಲು ಮಾತ್ರ ನಾವು ಸೀಮಿತವಲ್ಲ. ನಾವು ಅವನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಲು ಸಿದ್ಧ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮದ್ರಸ ಅಧ್ಯಾಪಕರ ಪರಿಸರ ಕಾಳಜಿ ಮತ್ತು ಸೇವಾ ಮನೋಭಾವವನ್ನು ನಾವು ಪ್ರಶಂಸಿಸಲೇಬೇಕು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಅಬ್ದುಲ್ ರಶೀದ್ ಹನೀಫಿ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ ಮಾರಿಪಳ್ಳ, ಪರೀಕ್ಷಾ ಬೋರ್ಡು ಚಯರ್ ಮ್ಯಾನ್ ಶರೀಫ್ ದಾರಿಮಿ, ಉಪಾಧ್ಯಕ್ಷರುಗಳಾದ ಜಲೀಲ್ ದಾರಿಮಿ, ಶಂಶುದ್ದೀನ್ ಯಮಾನಿ, ಸದಸ್ಯರುಗಳಾದ ಅಶ್ರಫ್ ಅಝ್ಹರಿ ಬೋರುಗುಡ್ಡೆ, ಸ್ವಾದಿಖ್ ಹನೀಫಿ ಕುಂಬ್ರ, ತಸ್ಲೀಮ್ ಅರ್ಷದಿ, ಅಬ್ದುಲ್ಲಾ ದಾರಿಮಿ ಮಲ್ಲಿ, ಸಿದ್ದೀಖ್ ಹನೀಫಿ ಮಂಚಿ, ಮುಅತ್ತಿಬ್ ಅರ್ಷದಿ, ಅಬ್ದುಲ್ ಖಾದರ್ ಮದನಿ, ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಬಳ್ಳೂರುಗುಡ್ಡೆ, ಮುಹಮ್ಮದ್ ಅಶ್ರಫ್ ಮೌಲವಿ ಬಳ್ಳೂರುಗುಡ್ಡೆ, ಅಬ್ದುಲ್ ರಝಾಕ್ ದಾರಿಮಿ ವಳಚ್ಚಿಲ್ಪದವು, ಅಬೂಬಕರ್ ಸಿದ್ದೀಖ್ ಅನ್ಸಾರಿ, ಅಬ್ದುಲ್ ರಶೀದ್ ಅಝ್ಹರಿ, ಅಬ್ದುಲ್ಲ ಮುಸ್ಲಿಯಾರ್ , ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸಲಹೆಗಾರ ರಫೀಕ್ ಮಾಸ್ಟರ್, ಸದಸ್ಯರಾದ ಅಸ್ಪರ್ ಹುಸೈನ್, ಅಸ್ಲಂ ಗೂಡಿನಬಳಿ, ನಕಾಶ್ ಬಾಂಬಿಲ ಮೊದಲಾದವರು ಭಾಗವಹಿಸಿದ್ದರು.
ಪುದು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ
ಪುದು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿದ ನೂತನ ಅಧ್ಯಕ್ಷ ರಮ್ಲಾನ್ ಅವರ ತಂಡ ಪರಿಸರ ಮಾಲಿನ್ಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅಧ್ಯಕ್ಷರು ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ತ್ಯಾಜ್ಯ ನಿರ್ವಹಣೆಗೆ ಪಂಚಾಯತ್ ವತಿಯಿಂದ ಮುಂದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ನಿಷೇಧಿತ ಜಾಗದಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಭರವಸೆ ಇತ್ತರು. ಅವರೊಂದಿಗೆ ಪಂಚಾಯತ್ ಪಿ.ಡಿ.ಒ ಪ್ರೇಮಲತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಉಮರ್ ಫಾರೂಖ್, ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್, ಸಲಾಂ ಮತ್ತು ಸ್ವಚ್ಛತಾ ಸಿಬಂದಿ ಮುಹಮ್ಮದ್ ಕೈಸ್ ಉಪಸ್ಥಿತರಿದ್ದರು.
“ ಸ್ವಚ್ಛತೆ ಸತ್ಯವಿಶ್ವಾಸದ ಅರ್ಧಭಾಗವಾಗಿದೆ. ಆಂತರಿಕ ಶುದ್ಧಿ ಮತ್ತು ಬಾಹ್ಯ ಶುದ್ಧಿ ಉಳ್ಳವವನನ್ನು ಅಲ್ಲಾಹನು ಇಷ್ಟಪಡುತ್ತಾನೆ. ನಮ್ಮ ಹೃದಯ, ಆತ್ಮ ಶುದ್ಧಿಯೊಂದಿಗೆ ನಮ್ಮ ಬಾಹ್ಯ ಪರಿಸರಗಳಾದ ನಮ್ಮ ಮನೆ, ಮದ್ರಸ, ಶಾಲೆ, ಮಸೀದಿ ಮತ್ತು ನಮ್ಮ ಸುತ್ತಮುತ್ತ ಎಲ್ಲಾ ಪರಿಸರ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವಾಗಿದೆ. ನಾವು ಕೇವಲ ಭಾಷಣ ಮಾತ್ರ ಮಾಡುವವರು ಆಗದೆ ಅದನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸುವವರಾಗಬೇಕು. ಪರಿಸರ ಮಾಲಿನ್ಯದಿಂದಾಗಿ ಹಲವಾರು ಸಾಂಕ್ರಾಮಿಕ ರೋಗಗಳು ಹರಡಿ ಜನಸಾಮಾನ್ಯರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ನಮ್ಮದು ಇದೊಂದು ಪುಟ್ಟ ಪ್ರಯತ್ನ. ಇಂತಹಾ ಉತ್ತಮ ಕಾರ್ಯಗಳಿಗೆ ನಮ್ಮ ಇಡೀ ಅಡ್ಯಾರ್ ಕಣ್ಣೂರು ರೇಂಜ್ನ ಸಮಸ್ತ ಮದ್ರಸ ಅದ್ಯಾಪಕರು ಸದಾ ನಮ್ಮ ಜೊತೆಗಿದ್ದಾರೆ”
-ಅಬ್ದುಲ್ ರಶೀದ್ ಹನೀಫಿ, ಅಧ್ಯಕ್ಷರು, ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್
“ನಮ್ಮ ಪುದು ಗ್ರಾಮ ಪಂಚಾಯತ್ ಸ್ವಚ್ಛತೆಯ ವಿಷಯದಲ್ಲಿ ಸ್ವಲ್ಪ ಹಿಂದೆ ಇದೆ. ನಾನು ಇತ್ತೀಚಿಗೆ ಅಧಿಕಾರ ವಹಿಸಿಕೊಂಡಾಗ ಮಾಧ್ಯಮದ ಮುಂದೆ ಸ್ವಚ್ಛತೆ ಮತ್ತು ದಾರಿದೀಪ ವ್ಯವಸ್ಥೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿರುತ್ತೇನೆ. ಅದನ್ನು ಕಾರ್ಯರೂಪಕ್ಕೆ ತರುವ ಮುಂಚೆ ಉಸ್ತಾದರುಗಳು ಸ್ವಚ್ಛತೆ ಮಾಡುವ ಮೂಲಕ ನಮ್ಮನ್ನು ನೆನಪಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸಂಘಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು. ತ್ಯಾಜ್ಯ ನಿರ್ವಹಣಾ ಘಟಕವನ್ನು ತೆರೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಕಸ ಎಸೆಯುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮ ಅಧಿಕಾರ ಅವಧಿಯಲ್ಲಿ ಪುದು ಗ್ರಾಮವನ್ನು ಸ್ವಚ್ಛ ಮತ್ತು ಮಾದರಿ ಗ್ರಾಮವಾಗಿ ರೂಪಿಸಲು ಗರಿಷ್ಠ ಪ್ರಯತ್ನವನ್ನು ಮಾಡುತ್ತೇವೆ”
- ರಮ್ಲಾನ್, ಅಧ್ಯಕ್ಷರು, ಪುದು ಗ್ರಾಮ ಪಂಚಾಯತ್.
“ನಮ್ಮ ಸಂಸ್ಥೆಯು ಪರಿಸರ ಸ್ವಚ್ಛತೆಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಸ್ವಚ್ಛತಾ ಮಾಸಾಚರಣೆಯನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗಿದೆ. ನಮ್ಮ ಸಂಸ್ಥೆಯ ಮುಖಾಂತರ ಹಲವೆಡೆ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಿ ಇಸ್ಲಾಮಿನ ಸುಂದರ ಸಂದೇಶವನ್ನು ಜಗತ್ತಿಗೆ ರವಾನಿಸಿದ ಮದ್ರಸ ಅಧ್ಯಾಪಕರನ್ನು ನಾನು ಮನಸಾರೆ ಅಭಿನಂದಿಸುತ್ತಿದ್ದೇನೆ. ಅವರ ಈ ಕಾರ್ಯಕ್ರಮ ನಮಗೆ ಮತ್ತು ಇಡೀ ಸಮಾಜಕ್ಕೆ ಇನ್ನಷ್ಟು ಸೇವೆಗೈಯಲ್ಲು ಸ್ಫೂರ್ತಿಯನ್ನು ನೀಡಿದೆ"
- ಅಬ್ದುಲ್ ರವೂಫ್ ಪುತ್ತಿಗೆ, ಸ್ಥಾಪಕಾಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್