ಸಾಸ್ತಾನ ಚರ್ಚಿನಲ್ಲಿ ನಟನೆಯ ಮೂಲಕ ‘ಯೇಸುವಿನ ಶಿಲುಬೆಯ ಹಾದಿ’
ಬ್ರಹ್ಮಾವರ, ಮಾ.30: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಗುಡ್ ಫ್ರೈಡೆ ಅಥವಾ ಶುಭ ಶುಕ್ರವಾರವನ್ನು ಬ್ರಹ್ಮಾವರ ತಾಲೂಕಿನಾದ್ಯಂತ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಇಂದು ಆಚರಿಸಲಾಯಿತು.
ಚರ್ಚುಗಳಲ್ಲಿ ಭಕ್ತಾದಿಗಳು ಪ್ರಾರ್ಥನೆ, ಧ್ಯಾನದೊಂದಿಗೆ ಯೇಸುವಿನ ಕೊನೆಯ ದಿನಗಳ ಕಷ್ಟಗಳನ್ನು ನೆನಪಿಸುವ ಶಿಲುಬೆಯ ಹಾದಿ ವಾಚನದ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡರು.
ಸಾಸ್ತಾನದ ಸಂತ ಅಂತೋನಿ ಚರ್ಚಿನಲ್ಲಿ ಯುವ ವಿದ್ಯಾರ್ಥಿ ಸಂಚಾಲನ ಹಾಗೂ ಇತರ ಸಂಘಟನೆಗಳ ಸದಸ್ಯರು ಜೊತೆಯಾಗಿ ಸೇರಿ, ಯೇಸು ಕ್ರಿಸ್ತರು ಬಂಧನಕ್ಕೆ ಒಳಗಾಗುವುದರಿಂದ ತೊಡಗಿ ಶಿಲುಬೆಯ ಮೇಲೆ ಮರಣವನ್ನಪ್ಪುವ ವರೆಗಿನ ಅನೇಕ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಅವಲೋಕಿಸಿ ಪ್ರಾರ್ಥಿಸುತ್ತಾ ಸಾಗುವ ಶಿಲುಬೆಯ ಹಾದಿಯ ಪ್ರಕ್ರಿಯೆಯನ್ನು ನಟನೆಯ ಮೂಲಕ ಆಡಿ ತೋರಿಸಿದರು. ಇದರಲ್ಲಿ ಚರ್ಚಿನ ಯುವಕರು ಮತ್ತು ವಿದ್ಯಾರ್ಥಿಗಳು ಸೇರಿದ್ದರು.
ಈ ಶಿಲುಬೆಯ ಹಾದಿಯಲ್ಲಿ ಯೇಸುವಿನ ಸಾವಿನ ಕೊನೆಯ ಕ್ಷಣಗಳನ್ನು ಮೆಲುಕು ಹಾಕಲಾಗುತ್ತದೆ. ಚರ್ಚಿನ ಧರ್ಮಗುರುಗಳಾದ ವಂ.ಜೋನ್ ವಾಲ್ಟರ್ ಮೆಂಡೊನ್ಸಾ ನೇತೃತ್ವದಲ್ಲಿ ಬ್ರದರ್ ಪ್ರದೀಪ್ ಕಾರ್ಡೋಜಾ ಮತ್ತು ಅನಿತಾ ಅಲ್ಮೇಡಾ ನಿರ್ದೇಶನದೊಂದಿಗೆ ವೈಸಿಎಸ್, ವೇದಿ ಸೇವಕರು, ಕೆಥೊಲಿಕ್ ಸಭಾ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಶಿಲುಬೆಯ ಹಾದಿಯನ್ನು ಅತ್ಯಂತ ಮನಮುಟ್ಟುವಂತೆ ಆಡಿ ತೋರಿಸಲಾಯಿತು.
ಶಿಲುಬೆಯ ಹಾದಿಯಲ್ಲಿ ಯೇಸುವಿಗೆ ಮರಣ ದಂಡನೆಯನ್ನು ಹೇರಿದ ಬಳಿಕ ಯೇಸುಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತು ಮೂರು ಬಾರಿ ಬೀಳುವುದು, ಶಿಲುಬೆಯನ್ನು ಹೊತ್ತು ಸಾಗಲು ಕಷ್ಟವಾದಾಗ ಯೇಸುವಿನ ಸಹಾಯಕ್ಕೆ ಬಂದ ಸಿರೇನ್ ನಗರದ ಸಿಮಾಂವ್ ದೃಶ್ಯ, ಯೇಸು ಶಿಲುಬೆ ಹೊತ್ತು ಸಾಗುತ್ತಿದ್ದಾಗ ಅವರ ಆಯಾಸಭರಿತ ಮುಖವನ್ನು ಕರವಸ್ತ್ರದಲ್ಲಿ ಒರೆಸಲು ಬಂದ ವೆರೊನಿಕಾ, ಯೇಸುವನ್ನು ಶಿಲುಬೆಗೇರಿಸಿ ಮೊಳೆಯನ್ನು ಜಡಿಯುವ ದೃಶ್ಯಗಳು ನೆರೆದಿದ್ದ ಭಕ್ತರ ಕಣ್ಣಾಲಿಗಳನ್ನು ಒದ್ದೆಗೊಳಿಸಿದವು.