ಕಾರ್ಕಳ: ಉದ್ಯಮಿಗೆ ಕೊಲೆ ಬೆದರಿಕೆ, ಆರೋಪಿಗಳ ಬಂಧನ
ಕಾರ್ಕಳ, ಮಾ.30: ತಾಲೂಕು ಕೆದಿಂಜೆ ಗ್ರಾಮದ ಬಿಎಸ್ಕೆ ಕ್ಯಾಶ್ಯೂ ಪ್ಯಾಕ್ಟರಿಯ ಮಾಲಕರಿಗೆ 12 ಲಕ್ಷ ರೂ. ಹಣ ನೀಡುವಂತೆ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರ ಕಾರ್ಯಾಚರಣೆಗಿಳಿದ ಕಾರ್ಕಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮೂಡುಬಿದಿರೆ ಮೂಡುಮಾರ್ನಾಡು ಗ್ರಾಮದ ನವೀನ್ ಆಚಾರಿ (32), ನಿಟ್ಟೆ ಗ್ರಾಮ ನೆಲ್ಲಿಗುಡ್ಡೆಯ ಶಿವಕುಮಾರ್ (24), ಕಲ್ಯಾ ಗ್ರಾಮದ ಹಾಳೆಕಟ್ಟೆಯ ಭರತ್ ಪೂಜಾರಿ (24) ಹಾಗೂ ಕೆದಿಂಜೆ ಗ್ರಾಮದ ಬರ್ಕೆದಗುಡ್ಡೆಯ ಪ್ರಜೋತ್ (24) ಎಂದು ಗುರುತಿಸಲಾಗಿದೆ.
ಕೆದಿಂಜೆ ಗ್ರಾಮದ ಉದ್ಯಮಿ ಮೊಬೈಲಿಗೆ ಕಳೆದ ಒಂದು ವಾರದಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಣಕ್ಕಾಗಿ ಕರೆ ಮಾಡಿ, ಹಣ ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡುತ್ತಿದ್ದರು. ಮಾ. 28ರಂದು ಇದೇ ವ್ಯಕ್ತಿಗಳು ಕರೆ ಮಾಡಿ 12 ಲಕ್ಷ ರೂ. ಹಣ ರೆಡಿ ಮಾಡಿ, ಮರುದಿನ ತಾವು ಹೇಳಿದ ಜಾಗದಲ್ಲಿ ಅದನ್ನು ತಲುಪಿಸಬೇಕು ಎಂದು ಬೆದರಿಕೆ ಒಡ್ಡಿರುವುದಾಗಿ ನಿನ್ನೆ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಅವರ ಆದೇಶ, ಎಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನ ಹಾಗೂ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ಅವರ ನಿರ್ದೇಶನದಂತೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ನಾಸಿರ್ ಹುಸೈನ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ತಕ್ಷಣ ಕಾರ್ಯಾಚರಣೆ ಗಿಳಿದರು.
ಪೊಲೀಸರು ಆರೋಪಿಗಳು ಬರಲು ಹೇಳಿದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಪರಪ್ಪಾಡಿಗೆ ತೆರಳಿ ದೂರದಲ್ಲಿ ಮರೆಯಲ್ಲಿ ನಿಂತು ಬರುವ ಆರೋಪಿಗಳಿ ಗಾಗಿ ಹೊಂಚು ಹಾಕುತಿದ್ದರು. ಇದೇ ವೇಳೆ ಉದ್ಯಮಿ ಕಾರಿನಲ್ಲಿ ಪರಪ್ಪಾಡಿ ಬಸ್ ನಿಲ್ದಾಣದ ಬಳಿ ಕುಳಿತಿದ್ದಾಗ ಇಬ್ಬರು ಆರೋಪಿಗಳು ಮೋಟಾರು ಬೈಕಿನಲ್ಲಿ ಬಂದು ಒಬ್ಬನು ಉದ್ಯಮಿಯ ಕಾರಿನ ಬಳಿ ಬಂದು ಹಣ ಎಲ್ಲಿ ಎಂದು ಕೇಳಿದಾಗ ಅವರು ಹಣ ಕಾರಿನ ಹಿಂದಿನ ಸೀಟಿನಲ್ಲಿದೆ ಎಂದು ಹೇಳಿದರು.
ಆರೋಪಿ ಕಾರಿನ ಹಿಂದಿನ ಸೀಟಿನಲ್ಲಿ ಹಣ ಇಲ್ಲದ್ದನ್ನು ನೋಡಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲನ್ನು ಸುಲಿಗೆ ಮಾಡಿಕೊಂಡು ಓಡಿದ್ದು, ಕೂಡಲೇ ಅಲ್ಲೇ ಇದ್ದ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಸುಲಿಗೆ ಮಾಡಿದ ಚಿನ್ನದ ಸರ ಹಾಗೂ ಮೊಬೈಲ್ನ್ನು ವಶಪಡಿಸಿಕೊಂಡರು. ಇದರೊಂದಿಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ ಮೋಟಾರು ಬೈಕ್ನ್ನು ಸಹ ವಶಕ್ಕೆ ತೆಗೆದುಕೊಂಡರು.
ಬಳಿಕ ವಿಚಾರಣೆ ವೇಳೆ ಆರೋಪಿಗಳು ನೀಡಿದ ಹೇಳಿಕೆಯಂತೆ ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಲಾಯಿತು. ಆರೋಪಿಗಳಿಂದ 40 ಸಾವಿರ ರೂ. ಮೌಲ್ಯದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ಗಳನ್ನು, ಮೂರು ಲಕ್ಷ ರೂ.ಮೌಲ್ಯದ ಕಾರು ಹಾಗೂ ಸುಮಾರು 20 ಸಾವಿರ ರೂ.ಮೌಲ್ಯದ ಮೋಟಾರು ಸೈಕಲ್ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಕಾರ್ಕಳ ಗ್ರಾಮಾಂತರ ಪಿಎಸ್ಐ ನಾಸಿರ್ ಹುಸೈನ್, ಸಿಬ್ಬಂದಿಗಳಾದ ರಾಜೇಶ್ ಪಿ., ಮಂಜುನಾಥ್, ಉಮೇಶ್, ಗಿರಿಧರ್ ಪೈ ಹಾಗೂ ಜಗದೀಶ್ ಭಾಗವಹಿಸಿದ್ದರು.