ಯುನಿವೆಫ್: ಉಳ್ಳಾಲದಲ್ಲಿ ಯುವಕರೊಂದಿಗೆ ಸಂವಾದ

Update: 2018-04-02 11:54 GMT

ಮಂಗಳೂರು, ಎ. 2: ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಮುಕ್ಕಚ್ಚೇರಿಯಲ್ಲಿ 'ಮುಸ್ಲಿಮರ ಈಗಿನ ಸಮಸ್ಯೆಗಳು ಮತ್ತು ಪರಿಹಾರ' ಎಂಬ ವಿಷಯದಲ್ಲಿ ಸ್ಥಳೀಯ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

'ಸಮುದಾಯದ ಹೊಣೆಗಾರಿಕೆ ಹಾಗೂ ಸಬಲೀಕರಣದ ಕನಸು ಮತ್ತು ಸಾಂಘಿಕ ನಿರ್ವಹಣೆ' ಕುರಿತು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಂವಾದ ನಡೆಸಿದರು.

ಸಂವಾದದಲ್ಲಿ ಮುಸ್ಲಿಮರ ಪ್ರಸಕ್ತ ಸ್ಥಿತಿಗತಿಗಳು, ಸಮುದಾಯದ ಸಬಲೀಕರಣದ ಮಾರ್ಗೋಪಾಯಗಳ ಕುರಿತು ಅಂಕಿ ಅಂಶಗಳ ಸಮೇತ ಚರ್ಚೆ ನಡೆಸಲಾಯಿತು. ಸಮಸ್ಯೆಗಳ ಪ್ರತಿಯೊಂದು ಆಯಾಮಗಳ ಸಮಗ್ರ ಅವಲೋಕನ ನಡೆಸಲಾಯಿತು. ಪ್ರಸಕ್ತ ರಾಜಕೀಯ ಸನ್ನಿವೇಶ, ಮುಸ್ಲಿಮ್ ಐಕ್ಯತೆ, ಕೋಮುವಾದದ ಅಪಾಯಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಯುವಕರು ಯುನಿವೆಫ್ ಜೊತೆ ಸೇರಬೇಕೆಂದು ಅವರು ಕರೆ ನೀಡಿದರು.

ಯುನಿವೆಫ್ ಕರ್ನಾಟಕ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಯುನಿವೆಫ್ ಅವರಿಗೊಂದು ವೇದಿಕೆಯಾಗಿದೆ ಎಂದರು.

ನಿಮ್ರಾ ಮಸೀದಿಯ ಇಮಾಮ್ ಮೌ. ಹಶೀಮುದ್ದೀನ್  ಕಿರ್‌ಅತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉಳ್ಳಾಲ ಶಾಖೆಯ ಅಧ್ಯಕ್ಷ ಬಿ.ಎಂ. ಬದ್ರುದ್ದೀನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಸೈಫುದ್ದೀನ್, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಅಡ್ವಕೇಟ್ ಸಿರಾಜುದ್ದೀನ್ ಮತ್ತು ಅಬ್ದುಲ್ಲಾ ಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News