ಖಾಸಗಿ ಕಾರ್ಯಕ್ರಮಕ್ಕೆ ನಿರ್ಬಂಧ: ಉಡುಪಿ ಕಾಂಗ್ರೆಸ್ ಆಕ್ಷೇಪ
ಉಡುಪಿ, ಎ.2: ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ಕಡ್ಡಾಯವಾಗಿ ಚುನಾವಣಾ ಆಯೋಗದ ಪರವಾನಿಗೆ ಪಡೆಯಬೇಕೆನ್ನುವ ಆದೇಶದಿಂದ ಜನಸಾಮಾನ್ಯರು ಅನಗತ್ಯವಾಗಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕೆಲವು ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ರಾಜಕೀಯ ಸಮೀಕರಣಗೊಳಿಸಿರುವುದರಿಂದ ಸಂಘಟನೆಗಳು ಹಮ್ಮಿಕೊಳ್ಳುವ ಸಭೆ ಸಮಾರಂಭ ಗಳನ್ನು ಗಮನದಲ್ಲಿರಿಸಿ ಚುನಾವಣಾ ಆಯೋಗ ಈ ಆದೇಶವನ್ನು ಹೊರಡಿಸಿರಬಹುದು. ಆದರೆ ವ್ಯಕ್ತಿಗತವಾಗಿ ನಡೆಸುವ ಕಾರ್ಯಕ್ರಮಗಳಿಗೆ ಈ ಆದೇಶದಿಂದ ಹೆಚ್ಚಿನ ಹೊರೆ ಬೀಳುತ್ತಿದೆ. ಇದರಿಂದ ಜನಸಾಮಾನ್ಯರು ಅನಗತ್ಯವಾಗಿ ಅಲೆದಾಡುವುದನ್ನು ಜಿಲ್ಲಾಡಳಿತ ಮನಗಾಣಬೇಕಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಕ್ಷೇತ್ರದ ಅಭಿವೃದ್ಧಿಗಳನ್ನು ಬಿಂಬಿಸುವ ಸಚಿವರ ಪ್ರಚಾರ ವಾಹನವನ್ನು ನೀತಿ ಸಂಹಿತೆಯ ಹೆಸರಲ್ಲಿ ಸಮಯಾವಕಾಶ ನೀಡದೇ ವಾಹನ ತಂಗುದಾಣ ದಲ್ಲಿಯೇ ವಶಕ್ಕೆ ಪಡೆದಿರುವುದು ಅವಸರದ ನಡೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳ ದಾಖಲೆಗಳು ಇಲ್ಲದಿರುವಾಗ ಮದುವೆ ಹಾಗೂ ಇನ್ನಿತರ ಖಾಸಗಿ ಕಾರ್ಯಕ್ರಮಗಳಿಗೆ ಪರವಾನಿಗೆ ಪಡೆಯಬೇಕೆಂಬ ಆದೇಶವನ್ನು ಹಿಂಪಡೆಯಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.