ಉಡುಪಿ: ಸರಕಾರಿ ಕಚೇರಿಗಳ ದೈನಂದಿನ ಆಡಳಿತದಲ್ಲಿ ಮತದಾನ ಜಾಗೃತಿ
ಉಡುಪಿ, ಎ.2: ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ದೈನಂದಿನ ಆಡಳಿತ ವ್ಯವಹಾರಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಕುರಿತಂತೆ ವಿನೂತನ ಪ್ರಯತ್ನವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಜಾರಿಗೆ ತಂದಿದ್ದಾರೆ.
ಸಾಮಾನ್ಯವಾಗಿ ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಯಾವುದೇ ಪತ್ರ ನೀಡಿದಲ್ಲಿ, ಅದನ್ನು ಸ್ವೀಕರಿಸಿದ ಕುರಿತು, ಸಾರ್ವಜನಿಕರಿಗೆ ಸ್ವೀಕೃತಿ/ಹಿಂಬರಹ ನೀಡಲಾಗುತ್ತದೆ. ಈ ಸ್ವೀಕೃತಿಯಲ್ಲಿ ಇಲಾಖೆಯ ಹೆಸರು ಮತ್ತು ದಿನಾಂಕ ಇರುವ ಮೊಹರು (ಸೀಲ್) ಹಾಕಲಾಗುತ್ತದೆ.
ಆದರೆ ಈಗ ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಮತದಾನ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ, ಎಲ್ಲಾ ಇಲಾಖೆ ಗಳು ಸಾರ್ವಜನಿಕರಿಗೆ ನೀಡುವ ಸ್ವೀಕೃತಿ ಹಿಂಬರಹಗಳಿಗೆ ತಮ್ಮ ಇಲಾಖೆಯ ಸೀಲ್ ಜೊತೆಗೆ ‘ಮತ ಚಲಾಯಿಸಿ, ಪ್ರಜಾಪ್ರಭುತ್ವ ಬೆಳೆಸಿ’ ಎನ್ನುವ ಸೀಲ್ನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲಾ ಗ್ರಾಪಂ, ನಿಗಮ, ಮಂಡಳಿಗಳಿಗೆ ಸುಮಾರು 400 ಸೀಲ್ ಹಾಕುವ ಮುದ್ರೆಗಳನ್ನು ಸ್ವೀಪ್ ಸಮಿತಿ ವತಿಯಿಂದ ಸರಬರಾಜು ಮಾಡಲಾಗಿದೆ.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳಿಗೆ ನೀಡುವ ಆರೋಗ್ಯ ಚೀಟಿಯಲ್ಲಿ ಸಹ ಈ ಮುದ್ರೆಯನ್ನು ಕಡ್ಡಾಯವಾಗಿ ಬಳಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿ ಮತದಾನ ಮಹತ್ವದ ಕುರಿತಂತೆ ಅರಿವು ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಮಲ್ಪೆ ಕಡಲ ತೀರದಲ್ಲಿ ಪ್ಯಾರಾಚೂಟ್ನಲ್ಲಿ ಮತದಾನ ಜಾಗೃತಿ ಕುರಿತು ಸಂದೇಶ ಮೂಡಿಸಲಾಗುತ್ತಿದೆ. ಕಳೆದ ಬಾರಿ ಕಡಿಮೆ ಮತದಾನ ನಡೆದ ಪ್ರದೇಶಗಳಲ್ಲಿ ಯಕ್ಷಗಾನದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಪಶಿ ತಿಳಿಸಿದ್ದಾರೆ.