ಹರೀಶ್ ಶೇರಿಗಾರ್ ನಿರ್ಮಾಣದ ‘ಮಾರ್ಚ್ 22’ ಕನ್ನಡ ಚಿತ್ರದ ಹಾಡಿನ ರಚನೆಗೆ ಅತ್ಯುತ್ತಮ ಪ್ರಶಸ್ತಿ

Update: 2018-04-13 16:02 GMT

ಹೊಸದಿಲ್ಲಿ, ಎ.13: ಎಸಿಎಂಇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಹಿನ್ನೆಲೆ ಗಾಯಕ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಕನ್ನಡ ಚಿತ್ರದ ಹಾಡಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ.

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರತಿಷ್ಠಿತ 65ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ ಹೊಸದಿಲ್ಲಿಯ ಶಾಸ್ತ್ರಿ ಭವನದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಕಾನ್ಫರೆನ್ಸ್ ಕೊಠಡಿಯಲ್ಲಿ ಪ್ರಕಟಿಸಲಾಯಿತು.

ಮಂಗಳೂರು ಮೂಲದ ಹರೀಶ್ ಶೇರಿಗಾರ್ ಅವರ ‘ಮಾರ್ಚ್ 22’ ಕನ್ನಡ ಚಿತ್ರದ ‘ಮುತ್ತು ರತ್ನದ ಪೇಟೆ, ಚಿಧ್ರವಾಯಿತೇ ಕೋಟೆ’ ಸುಮಧುರ ಹಾಡಿನ ರಚನೆಗೆ ಗೀತಾ ರಚನೆಕಾರ ಪ್ರಹಲ್ಲಾದ್ ಅವರಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಅವರು ಈ ಹಾಡಿನಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನ ಕೌಶಲ್ಯವನ್ನು ಮೆರೆದಿದ್ದಾರೆ. ಕನ್ನಡದ ಅತ್ಯುತ್ತಮ ಚಿತ್ರವಾಗಿ ‘ಹೆಬ್ಬೆಟ್ಟು ರಾಮಕ್ಕ’ ಆಯ್ಕೆಯಾಗಿದೆ. ಈ ಸಲದ 2017ರ ಅತ್ಯುತ್ತಮ ನಟ ಪ್ರಶಸ್ತಿಗೆ ‘ರುಸ್ತುಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷಯ್ ಕುಮಾರ್ ಭಾಜನರಾಗಿದ್ದಾರೆ.

ದಿವಂಗತ ನಟಿ ಶ್ರೀದೇವಿಗೆ, ಮಾಮ್ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಮಲಯಾಳಂ ಚಿತ್ರ ಮಿನ್ನಮಿನುಂಗು ಚಿತ್ರದ ನಟನೆಗಾಗಿ ಸುರಭಿ ಲಕ್ಷ್ಮೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಮೇ 3ರಂದು ಪ್ರಶಸ್ತಿ ಪ್ರದಾನ

ಮೇ 3ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹೊಸದಿಲ್ಲಿಯಲ್ಲಿ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಈ ಸಲದ ಪ್ರಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಕಾರ್ಯ ನಿರ್ವಹಿಸಿದ್ದಾರೆ. ಹತ್ತು ಸದಸ್ಯರನ್ನು ಒಳಗೊಂಡಿರುವ ಆಯ್ಕೆ ಸಮಿತಿಯಲ್ಲಿ ಚಿತ್ರಕಥೆಗಾರರಾದ ಇಮ್ತಿಯಾಝ್ ಹುಸೈನ್, ಗೀತಸಾಹಿತಿ ಮೆಹಬೂಬ್, ನಟಿ ಗೌತಮಿ ತಡಿಮಲ್ಲ, ಕನ್ನಡದ ನಿರ್ದೇಶಕ ಪಿ ಶೇಷಾದ್ರಿ, ಅನಿರುದ್ಧ್‌ರಾಯ್ ಚೌದರಿ, ರಂಜಿತ್ ದಾಸ್, ರಾಜೇಶ್ ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರುಮಿ ಜಾಫ್ರಿ ಉಪಸ್ಥಿತರಿದ್ದರು.

ಸಮಾಜಕ್ಕೆ ಹೊಸ ಸಂದೇಶ ‘ಮಾರ್ಚ್ 22’ ಸಿನೆಮಾ ಮೂಲಕ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡುವ ಪ್ರಯತ್ನವನ್ನು ನಿರ್ಮಾಪರು ಮತ್ತು ನಿರ್ದೇಶಕರು ಯಶಸ್ವಿಯಾಗಿ ಮಾಡಿದ್ದಾರೆ. ಇಂಥ ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ.

ಹರೀಶ್ ಶೇರಿಗಾರ್ ಅವರ ಎಸಿಎಂಇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್ 22’ ಸಿನೆಮಾ ಬಗ್ಗೆ ಕನ್ನಡ ಸಿನೆಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್.ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ರೀತಿಯ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದಾಗ್ಯೂ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಂಬಂಧಕ್ಕೆ ಕೆಲವೊಮ್ಮೆ ಕೆಲವು ಪ್ರಚೋದನೆಗಳಿಂದಾಗಿ ಧಕ್ಕೆ ಬಂದಿರುವುದು ಕೂಡ ಸತ್ಯ. ದೇಶದ ಇತಿಹಾಸದಲ್ಲಿ ಇದು ದೊಡ್ಡ ಗಾಯದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಮಾರ್ಚ್ 22’ ಸಿನೆಮಾ ತಂಡ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನವನ್ನು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News