ಉಡುಪಿ: ಎ.28ರಂದು ‘ಕರ್ನಾಟಕ ಮುಸ್ಲಿಂ ಜಮಾಅತ್’ ಘೋಷಣೆ
ಉಡುಪಿ, ಎ.21: ಮುಸ್ಲಿಮ್ ಬಹುಜನ ಸಂಘಟನೆ ‘ಕರ್ನಾಟಕ ಮುಸ್ಲಿಂ ಜಮಾಅತ್’ ಇದರ ರಾಜ್ಯಮಟ್ಟದ ಚಾಲನಾ ಸಮಾವೇಶವು ಎ.28ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಸಂಯೋಜನಾ ಸಮಿತಿಯ ಮುಖಂಡ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಮುಸ್ಲಿಮ್ ಸಮಾಜದ ಸಾಮಾಜಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಯೋಜನೆಗಳೊಂದಿಗೆ ಸಮುದಾಯದ ಬಹುಜನರ ಕ್ರಿಯಾ ವೇದಿಕೆ ಯಾಗಿ ಮುಸ್ಲಿಮ್ ಜಅಮಾತ್ ಕಾರ್ಯನಿರ್ವಹಿಸಲಿದೆ. ಈಗಾಗಲೇ ಕೇರಳ, ತಮಿಳುನಾಡು, ಕಾಶ್ಮೀರ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಜಮಾ ಅತ್ ಸಕ್ರಿಯವಾಗಿದೆ ಎಂದರು.
ಅಖಿಲ ಭಾರತ ಮುಸ್ಲಿಮ್ ಉಲೆಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ಸಂಘಟನಾ ಪ್ರತಿನಿಧಿ ಗಳ ಸಮ್ಮುಖದಲ್ಲಿ ಈ ಸಂಘಟನೆಗೆ ಚಾಲನೆ ನೀಡಲಿರುವರು. ಸದ್ಯ ರಾಜ್ಯ ಸಮಿತಿಯನ್ನು ರೂಪಿಸಿ, ಮುಂದೆ ಜಿಲ್ಲಾ ಸಮಿತಿಗಳನ್ನು ರಚಿಸಲಾಗುವುದು. ಆಯ್ಕ ಸಮಿತಿಯ ಮೂಲಕ ಅಧಿಕೃತ ರಾಜ್ಯ ಸಮಿತಿಯನ್ನು ಅಸ್ತಿತ್ವಕ್ಕೆ ತರ ಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಜಿಲ್ಲಾ ಸುನ್ನೀ ಸಂಯುಕ್ತ ಜಮಾ ಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಲ್ಯಾಸ್ ನಾವುಂದ, ಎಸ್ಎಂಎ ಜಿಲ್ಲಾ ಉಪಾಧ್ಯಕ್ಷ ಹಾಜಿ ಕೆ.ಮೊಯ್ದಿನ್ ಗುಡ್ವಿಲ್, ಎಸ್ವೈಎಸ್ ಜಿಲ್ಲಾ ಕಾರ್ಯದರ್ಶಿ ಹಂಝತ್ ಹೆಜಮಾಡಿ ಉಪಸ್ಥಿತರಿದ್ದರು.