ಮರದಲ್ಲಿ ತಲೆಕೆಳಗಾಗಿ ನೇತಾಡಿ ನವದಂಪತಿಯ ಫೋಟೋ ತೆಗೆದ ಛಾಯಾಗ್ರಾಹಕ ಯಾರು ಗೊತ್ತಾ?

Update: 2018-04-21 12:33 GMT

ತ್ರಿಶ್ಶೂರ್, ಎ.21: ಮರದ ಮೇಲೆ ಹತ್ತಿ ಕಾಲುಗಳನ್ನು ರೆಂಬೆಗಳೆಡೆಯಲ್ಲಿರಿಸಿ ತಲೆಕೆಳಗಾಗಿ ನೇತಾಡಿಕೊಂಡು ಫೋಟೋ ಕ್ಲಿಕ್ಕಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಪರಿಪೂರ್ಣ ಫೋಟೋ ತೆಗೆಯಬೇಕೆಂಬ ಅತ್ಯುತ್ಸಾಹದಿಂದ ವಸ್ತುಶಃ ಸರ್ಕಸ್ ಮಾಡುವ ಈ ಛಾಯಾಗ್ರಾಹಕನ  ವಿಡಿಯೋ ಆತನನ್ನು ರಾತ್ರಿ ಬೆಳಗಾಗುವುದರೊಳಗಾಗಿ ಪ್ರಸಿದ್ಧಿಗೊಳಿಸಿತ್ತು.

ಈ ಛಾಯಾಗ್ರಾಹಕನ ಹೆಸರು ವಿಷ್ಣು. ಈ ವೀಡಿಯೋದಲ್ಲಿ ವಿಷ್ಣು ಮರವೊಂದರ ಮೇಲೇರಿ ದಂಪತಿಯ ಫೋಟೋ ಕ್ಲಿಕ್ಕಿಸಿದ ಬಳಿಕ ಕ್ಯಾಮರಾವನ್ನು ವರನ ಕೈಗೆ ನೀಡಿ ನಂತರ ಮರದಿಂದ ಛಂಗನೆ ಜಿಗಿಯುವ ದೃಶ್ಯವಿದೆ.

ವಿಷ್ಣುವನ್ನು 'ವವ್ವಲ್' (ಮಲಯಾಳಂನಲ್ಲಿ ಬಾವಲಿ) ಛಾಯಾಗ್ರಾಹಕನೆಂದು ಕರೆಯಲಾಗುತ್ತದೆ. ವಿವಾಹ ಸಮಾರಂಭಗಳಲ್ಲಿ ಫೋಟೋ ತೆಗೆಯುವಲ್ಲಿ ಪರಿಣತರಾದ ಛಾಯಾಗ್ರಾಹಕರ ತಂಡ `ವೈಟರ್ ಆಂಪ್' ಇದರಲ್ಲಿ ವಿಷ್ಣು ಕೆಲಸ ಮಾಡುತ್ತಿದ್ದು ಎಪ್ರಿಲ್ 15ರಂದು ವಿವಾಹವಾದ ಶಿಯಾಝ್ ಹಾಗೂ ನವ್ಯಾ ಅವರ ವಿವಾಹದ ಫೋಟೋಗಳನ್ನೂ ಈ ತಂಡವೇ ಕ್ಲಿಕ್ಕಿಸಿದೆ.

ಈ ಹಿಂದೆ ಕೂಡ ತಾವು ಹೀಗೆ ಮರವೇರಿ ತಲೆಕೆಳಗಾಗಿ ನವದಂಪತಿಗಳ ಫೋಟೋಗಳನ್ನು ನಾಲ್ಕೈದು ಬಾರಿ ತೆಗೆದಿದ್ದಾಗಿ ಆತ ಹೇಳುತ್ತಾನೆ. ಎಪ್ರಿಲ್ 15ರಂದು ಆತ ಮರವೇರಿ ಫೋಟೋ ತೆಗೆಯುತ್ತಿದ್ದಂತೆಯೇ ಸಹೋದ್ಯೋಗಿಯೊಬ್ಬ ಅದರ ವೀಡಿಯೋ ಶೂಟಿಂಗ್ ನಡೆಸಿ ಅದನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿದ್ದೇ ಈಗ ವಿಷ್ಣು ಇಷ್ಟೊಂದು ಪ್ರಸಿದ್ಧನಾಗಲು ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News