×
Ad

ಸಿಡಿ ಪ್ರಕರಣ ಮುಗಿದ ಅಧ್ಯಾಯ: ರಘುಪತಿ ಭಟ್

Update: 2018-04-21 21:55 IST

ಉಡುಪಿ, ಎ.21: ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಮಾಡಿರುವ ಸಿಡಿಯು ನನ್ನ ವಿರುದ್ಧ ಗೆಲ್ಲಲು ಆಗದವರು ಮಾಡಿರುವ ಷಡ್ಯಂತರ. ಅದು ದೊಡ್ಡ ವಿಷಯವೇ ಅಲ್ಲ. ಈ ಬಗ್ಗೆ ಯಾವುದೇ ಪ್ರಕರಣ ಕೂಡ ದಾಖಲಾಗಿರಲಿಲ್ಲ. ಇದರಿಂದ ಜನರಿಗೆ ಯಾವುದೇ ಸಮಸ್ಯೆ ಕೂಡ ಆಗಿರಲಿಲ್ಲ. ಆದುದರಿಂದ ಅದು ಮುಗಿದ ಅಧ್ಯಾಯ. ಅದನ್ನು ಮತ್ತೆ ಮತ್ತೆ ಕೆದಕುವುದು ಸರಿಯಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯ ಪಕ್ಷದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಘೋಷಣೆ ವಿಳಂಬ ಆಗಲು ಪಕ್ಷದ ಒಳಗಿನ ತಾಂತ್ರಿಕ ಕಾರಣವೇ ಹೊರತು ಯಾವುದೇ ವಿರೋಧ ಅಲ್ಲ. ನನಗೆ ಟಿಕೆಟ್ ನೀಡುವುದಕ್ಕೆ ಯಾರು ವಿರೋಧ ಮಾಡಿಲ್ಲ. ಯಾರು ಕೂಡ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಲ್ಲ. ಎಲ್ಲರೂ ಪ್ರಚಾರ ಕಾರ್ಯಕ್ಕೆ ಬರುತ್ತಾರೆ. ಯಾವುದೇ ಸಂಶಯ ಬೇಡ. ಟಿಕೆಟ್ ವಿಳಂಬದಿಂದ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ, ನನಗೆ ಲಾಭವೇ ಆಗಿದೆ. ಈ ಬಾರಿ 100ಕ್ಕೆ 100 ಗೆಲ್ಲುವ ವಿಶ್ವಾಸ ಇದೆ ಎಂದರು.

ಶಿರೂರು ಸ್ವಾಮೀಜಿ ಸೇರಿದಂತೆ ಅಷ್ಟಮಠಾಧೀಶರ ಆಶೀರ್ವಾದ ಪಡೆದು ಕೊಳ್ಳುತ್ತೇನೆ. ಆ ಸಂದರ್ಭದಲ್ಲಿ ಶಿರೂರು ಸ್ವಾಮೀಜಿಯವರಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡುತ್ತೇನೆ. ಈಗಾಗಲೇ ಅವರನ್ನು ಪಕ್ಷದ ನಾಯಕರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅವರು ವಾಪಾಸ್ಸು ಪಡೆದು ಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗೆ ಇದೆ. ಶಿರೂರು ಸ್ವಾಮೀಜಿ ಸ್ಪರ್ಧಿಸಿದರೆ ಪ್ರಮೋದ್ ಮಧ್ವರಾಜ್ ಅವರಿಗೆ ಲಾಭ ಆಗುತ್ತದೆ ಎಂಬುದು ಸುಳ್ಳು. ಉಡುಪಿ ಕ್ಷೇತ್ರದ ಮತದಾರರು ಬುದ್ದಿವಂರೆಂದು ಅವರು ತಿಳಿಸಿದರು.

ಎ.23ಕ್ಕೆ ನಾಮಪತ್ರ ಸಲ್ಲಿಕೆ

ಬಿಜೆಪಿ ಪಕ್ಷ ಮತ್ತೆ ನನಗೆ ಅವಕಾಶ ನೀಡಿದೆ. ಪಕ್ಷದ ಮುಖಂಡರು ಹಾಗೂ ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಎ. 23ರಂದು ಬೆಳಗ್ಗೆ 10ಗಂಟೆಗೆ ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿ ಸಭೆ ನಡೆಸಿ ಬಳಿಕ ಪಾದಯಾತ್ರೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ರಘುಪತಿ ಭಟ್ ಹೇಳಿದರು.

ಮೇ 1ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವರು. ನಾನು 2004 ಮತ್ತು 2008ರಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಚಾರ ಕಾರ್ಯಕ್ಕೆ ಉಡುಪಿಗೆ ಆಗಮಿಸಿದ್ದರು. ಆ ಎರಡು ಸಂದರ್ಭದಲ್ಲೂ ನಾನು ಜಯಗಳಿಸಿದ್ದೆ. ಇದೀಗ ಮತ್ತೆ ಅವರು ಉಡುಪಿಗೆ ಆಗಮಿಸುತ್ತಿದ್ದಾರೆ ಎಂದು ಅವರು ಜಯದ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಭಾಕರ ಪೂಜಾರಿ, ದಿನಕರ ಬಾಬು, ರವಿ ಅಮೀನ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಶ್ರೀಶ ನಾಯಕ್, ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

‘ರೇವ್‌ಪಾರ್ಟಿಗೂ ನನಗೂ ಸಂಬಂಧವಿಲ್ಲ’

ಮಲ್ಪೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಿದ್ದೇನೆ ಹೊರತು ರೇವ್ ಪಾರ್ಟಿಯನ್ನು ನಾನು ಮಾಡಿಲ್ಲ. ನನ್ನ ಶಾಸಕ ಅವಧಿಯಲ್ಲಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದಿರುವುದು ರೇವ್ ಪಾರ್ಟಿ ಅಲ್ಲ. ಅದು ಇವೆಂಟ್ ಮೆನೇಜ್‌ಮೆಂಟ್. ನಾನು ಅಲ್ಲಿಗೆ ಶಾಸಕನಾಗಿ ಹೋಗಿದ್ದೇನೆ ಹೊರತು ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಸ್ಪಷ್ಟಪಡಿಸಿದರು.

ಅಜ್ಞಾತ ಸ್ಥಳದಲ್ಲಿ ಔತಣ ಕೂಟ ನಡೆಸಿ ಡ್ರಗ್ಸ್ ಸೇವಿಸುವುದು ರೇವ್ ಪಾರ್ಟಿ. ಆದರೆ ಇಲ್ಲಿ ಅಂತಹದ್ದು ಯಾವುದೂ ನಡೆದಿಲ್ಲ. ನಾನು ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಚರ್ಚೆ ನಡೆಯದೆ, ನನಗೆ ಸಂಬಂಧ ಇಲ್ಲದ ವಿಚಾರವನ್ನೇ ಹೆಚ್ಚು ಚರ್ಚಿಸಲಾಗುತ್ತಿದೆ. ಇದು ನನಗೆ ತುಂಬಾ ಬೇಸರ ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News