ಕಿರುಕುಳ ಆರೋಪ: ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ

Update: 2018-04-21 18:19 GMT

ಬಂಟ್ವಾಳ, ಎ. 21: ಪತಿ ಹಾಗೂ ಅತ್ತೆಯ ದೌರ್ಜನ್ಯಕ್ಕೆ ಬೇಸತ್ತ ನವ ವಿವಾಹಿತೆಯೋರ್ವರು ಅತಿಯಾಗಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ಶನಿವಾರ ನಡೆದಿದೆ.

ಇಲ್ಲಿನ ನಿವಾಸಿ ಬಾಲಕೃಷ್ಣ ಮಯ್ಯ ಎಂಬವರ ಪತ್ನಿ ಸುಪ್ರಭಾ (25) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಘಟನೆ ವಿವರ

ಉಪ್ಪಿನಂಗಡಿ ರಾಮನಗರದ ಸುರೇಂದ್ರ ಎಂಬವರ ಪುತ್ರಿ ಸುಪ್ರಭಾರನ್ನು ಕಳೆದ ಕೆಲವು ತಿಂಗಳ ಹಿಂದೆ ಬಾಲಕೃಷ್ಣ ಮಯ್ಯ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಬಳಿಕದ ದಿನಗಳಲ್ಲಿ ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಹಿಂಸೆ ಕೊಡುತ್ತಿರುವ ಬಗ್ಗೆ ತನ್ನ ತವರು ಮನೆಯಲ್ಲಿ ಹೇಳಿದ್ದರು. ಅಲ್ಲದೆ, ಶುಕ್ರವಾರ ರಾತ್ರಿ ಸುಪ್ರಭಾ ತನಗೆ ಕರೆ ಮಾಡಿ, ತಾನು ಮಾತ್ರೆ ತಿಂದಿದ್ದೇನೆ, ಅತ್ತೆ ಮತ್ತು ಪತಿ ತನ್ನ ಸಾವಿಗೆ ಕಾರಣ ಎಂದು ಹೇಳಿದ್ದಳು ಎಂದು ಮೃತಳ ತಂದೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಆಕೆ ಅಸ್ವಸ್ಥಳಾಗುತ್ತಿದ್ದಂತೆಯೇ ಮನೆಮಂದಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪತಿ-ಅತ್ತೆ ಬಂಧನ;

ವರದಕ್ಷಿಣೆಗಾಗಿ ಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಸುಪ್ರಭಾ ತಂದೆ ಸುರೇಂದ್ರ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪತಿ ಬಾಲಕೃಷ್ಣ ಮಯ್ಯ ಹಾಗೂ ಅತ್ತೆ ಶಶಿಕಲಾ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News