ಉಳ್ಳಾಲದಲ್ಲಿ ಕೊಲೆಯತ್ನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ
ಮಂಗಳೂರು, ಎ.23: ಉಳ್ಳಾಲದ ಫಾಸ್ಟ್ಫುಡ್ವೊಂದರ ಮಾಲಕ ಅಬ್ದುಲ್ ಗಫೂರ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಗವೀರ ಪಟ್ಣದ ರಮಿತ್ ಯಾನೆ ಧನುಷ್ (24) ಹಾಗೂ ಶ್ರವಣ್ ಯಾನೆ ಧನುಷ್ (22) ಬಂಧಿತ ಆರೋಪಿಗಳು.
ಎ.14ರಂದು ಸಂಜೆ 6:45ಕ್ಕೆ ಉಳ್ಳಾಲ ಪ್ಯಾರೀಸ್ ಜಂಕ್ಷನ್ನಲ್ಲಿರುವ ಫಾಸ್ಟ್ಫುಡ್ ಅಂಗಡಿಗೆ ಬಂದ ಆರೋಪಿಗಳು ಅಂಗಡಿ ಮಾಲಕ ಅಬ್ದುಲ್ ಗಫೂರ್ಗೆ ಅವಾಚ್ಯ ಶಬ್ದದಿಂದ ಬೈದು ಕುದಿಯುವ ಎಣ್ಣೆಯ ಬಾಣಲೆ ಎರಚಿ ಕೊಲೆ ಮಾಡಲು ಯತ್ನಿಸಿದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗಾಗಲೆ ಆರೋಪಿ ರಮಿತ್ ಮೇಲೆ 5 ಹಾಗೂ ಶ್ರವಣ್ ಮೇಲೆ 4 ಪ್ರಕರಣಗಳು ಉಳ್ಳಾಲ ಠಾಣೆಯಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ಗೋಪಿ ಕೃಷ್ಣ ಕೆ.ಆರ್., ಎಸ್ಸೈ ವಿನಾಯಕ್ ತೋರಗಲ್ ಮತ್ತು ಸಿಬ್ಬಂದಿ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಪಾಲ್ಗೊಂಡಿದ್ದರು.