ಎ.28ರಂದು ಬಂಟರ ಮಾತೃ ಸಂಘದ ಬಹಿರಂಗ ಅಧಿವೇಶನ

Update: 2018-04-24 17:58 GMT

ಮಂಗಳೂರು, ಎ.24: ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ ಎ. 28ರಂದು ಅಡ್ಯಾರ್‌ನ ವಿ.ಕೆ ಶೆಟ್ಟಿ ಸಭಾಭವನ ಅಡ್ಯಾರ್ ಗಾರ್ಡನ್ಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಅಧಿವೇಶನವನ್ನು ಬಂಟ್ಸ್ ಹಾಸ್ಟೆಲ್‌ನ ವಠಾರದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಚುನಾವಣಾ ಪ್ರಕ್ರಿಯೆಗಳಿಗೆ ಈ ಜಾಗವನ್ನು ಮೀಸಲಿಟ್ಟಿರುವುದರಿಂದ ಕಾರ್ಯಕ್ರಮ ಸ್ಥಳಾಂತರಿಸಲಾಗಿದೆ ಎಂದರು. ಬೆಳಗ್ಗೆ 10 ಗಂಟೆಗೆ ನಡೆಯುವ ಅಧಿವೇಶನದ ಅಧ್ಯಕ್ಷತೆಯನ್ನು ನ್ಯಾ. ಎನ್. ಸಂತೋಷ್ ಹೆಗ್ಡೆ ವಹಿಸಲಿದ್ದಾರೆ.

ಇದೇ ಸಂದರ್ಭ 2016-17ನೆ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಚಿನ್ನದ ಪದಕ, ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸರ್ವಿಸಸ್‌ನ ಮುಖ್ಯಸ್ಥ ಡಾ. ಸಂಜೀವ ರೈ, ಮಣಿಪಾಲ ವಿವಿಯ ಪಿಎಚ್‌ಡಿ ಪಿಡಿಎಫ್ ಎಂಎಂಎಂಸಿ ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಡಾ.ಕಿರಣ್ಮಯಿ ಎಸ್. ರೈ, ದೇಶ ಸೇವಾ ವಿಭಾಗದಲ್ಲಿ ಬ್ರಿಗೇಡಿಯರ್ ಐ.ಎನ್.ರೈ, ಹೊಟೇಲ್ ಉದ್ಯಮದಲ್ಲಿದ್ದು ಉತ್ತಮ ಸಮಾಜ ಸೇವೆಗೆ ಪುಣೆ ಹೊಟೇಲ್ ಉದ್ಯಮಿ ಜಗನ್ನಾಥ ಶೆಟ್ಟಿ ಪುಣೆ, ಉತ್ತಮ ಕೈಗಾರಿಕೋದ್ಯಮಿಯಾಗಿ ವಿ.ಕೆ. ಗ್ರೂಪ್ ಆಫ್ ಕಂಪನಿ ಮುಂಬೈನ ಅಧ್ಯಕ್ಷ ಮದ್ಯಗುತ್ತು ಕರುಣಾಕರ ಶೆಟ್ಟಿ ಮುಂಬೈ, ಜೀವಮಾನದ ಶ್ರೇಷ್ಠ ಸಾಧನೆಗೆ ಎಸ್‌ಕೆಎಸ್ ಗ್ರೂಪ್‌ನ ಸನತ್ ಕುಮಾರ್ ಶೆಟ್ಟಿ, ಉತ್ತಮ ಕೃಷಿಕ ಸಾಧನೆಗೆ ಕೆ.ಎನ್. ಪ್ರಫುಲ್ಲ ಆರ್. ರೈ, ನಡುಹಿತ್ಲು ಮಹಾಬಲ ಶೆಟ್ಟಿ, ಮೋನಪ್ಪ ಆಳ್ವ ವಿ. ಮುಳ್ಳೇರಿಯಾ, ಮೊಗರುಗುತ್ತು ರಾಜೇಂದ್ರ ಮೇಂಡ, ಸಾಹಿತ ಕ್ಷೇತ್ರದಲ್ಲಿ ಡಾ. ನಾಗವೇಣಿ ಹೊಸಬೆಟ್ಟು, ಉತ್ತಮ ಶಿಕ್ಷಕ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಉಷಾ ಎಚ್. ಬಲ್ಲಾಳ್, ಕರುಣಾಕರ ಶೆಟ್ಟಿ ಕೊಲ್ಲೂರು, ಉತ್ತಮ ಸಮಾಜ ಸೇವೆಗೆ ಸಿಎ ಎಚ್.ಆರ್. ಶೆಟ್ಟಿ, ಕಲಾ ಕ್ಷೇತ್ರದಲ್ಲಿ ಶಶಿ ವಿ. ಶೆಟ್ಟಿ, 2017ರ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಉತ್ತಮ ಕ್ರೀಡಾಪಟು ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಪುತ್ತೂರು, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಶೈಕ್ಷಣಿಕ ಸಾಧನೆಗೆ ನಿತೇಶ್ ಶೆಟ್ಟಿ ಅವರಿಗೆ ಚಿನ್ನದ ಪದಕ, ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಭಿಷೇಕ್ ಶೆಟ್ಟಿ ನೆಲ್ಯಾಡಿ, ಶಿಬಾನಿ ಜಿ. ಶೆಟ್ಟಿ, ಅದ್ವಿತ್ ಡಿ. ಶೆಟ್ಟಿ, ಸಾನ್ಯಾ ಡಿ. ಶೆಟ್ಟಿ, ಆಯುಷ್ ಆರ್. ಶೆಟ್ಟಿ ಹಾಗೂ ಯುವ ವಿಜ್ಞಾನಿಗಳಾದ ಪ್ರಖ್ಯಾತ್ ಭಂಡಾರಿ ಮತ್ತು ಪ್ರಣವ್ ಭಂಡಾರಿ ಪುತ್ತೂರು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಅದೇ ದಿನ ಅಪರಾಹ್ನ 2:30ಕ್ಕೆ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

50 ವಿಶೇಷ ಚೇತನರ ದತ್ತು

ಬಂಟರ ಯಾನೆ ನಾಡವರ ಮಾತೃ ಸಂಘವು ಪ್ರಸಕ್ತ ಸಾಲಿನಿಂದ 50 ಮಂದಿ ವಿಶೇಷ ಚೇತನರ ದತ್ತು ಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಸಂಘದ ಸಮಿತಿಯು ಅರ್ಹರನ್ನು ಆಯ್ಕೆ ಮಾಡಿ ಅವರಿಗೆ ಅಗತ್ಯ ನೆರವನ್ನು ಕಲ್ಪಿಸಲಿದೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News