ಕರ್ನಾಟಕದ ಚುನಾವಣೆ ದೇಶದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು: ಸ್ಯಾಮ್ ಪಿತ್ರೋಡ

Update: 2018-04-29 07:29 GMT

ಮಂಗಳೂರು, ಎ.29: ಕರ್ನಾಟಕದ ಚುನಾವಣೆ ದೇಶದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿಗಳ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಬಾರಿಯ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅತ್ಯುತ್ತಮ ಚುನಾವಣಾ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದೆ. ಜನರ ಅಭಿಪ್ರಾಯವನ್ನು ಸಂಗ್ರಹಿಸಿ ವೀರಪ್ಪ ಮೊಯ್ಲಿಯಂತಹ ಹಿರಿಯ ನಾಯಕರ ನೇತೃತ್ವದಲ್ಲಿ ಇದನ್ನು ತಯಾರಿಸಲಾಗಿದೆ. ನಾನೂ ಕೆಲವು ಸಲಹೆ ನೀಡಿದ್ದೇನೆ. ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ,ರೈತರ ಆದಾಯ ವೃದ್ಧಿಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಕ್ರಮಗಳು ಉತ್ತಮವಾದುದು ಎಂದು ಎಂದು ಸ್ಯಾಮ್ ತಿಳಿಸಿದರು.

*70 ವರ್ಷದಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಟೀಕೆ ದೇಶದ ಜನತೆಗೆ ಮಾಡುತ್ತಿರುವ ಅವಮಾನ
ಭಾರತ ದೇಶದಲ್ಲಿ 70 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುತ್ತಿರುವವರು ದೇಶದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಭಾವಿಸಬೇಕಾಗಿದೆ. ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತವನ್ನು ಟೀಕಿಸುತ್ತಾ ಚುನಾವಣೆಯ ಸಂದರ್ಭದಲ್ಲಿ ಏನೂ ಸಾಧನೆ ಆಗಿಲ್ಲ ಎನ್ನುತ್ತಿರುವವರಿಗೆ ನಾವು ಉತ್ತರ ನೀಡಬೇಕಾಗಿದೆ. 70 ವರ್ಷಗಳ ಹಿಂದೆ ಕೇವಲ 2 ದಶಲಕ್ಷ ಟೆಲಿಪೋನ್ ಸಂಪರ್ಕಗಳಿದ್ದ ಭಾರತದಲ್ಲಿ ಒಂದು ಬಿಲಿಯನ್ ಟೆಲಿಫೋನ್ ಬಳಕೆದಾರರಿದ್ದಾರೆ. ಸ್ವಾತಂತ್ರ ಪೂರ್ವದಲ್ಲಿ ದೇಶದ ಜನರ ಜೀವಿತಾವಧಿ ಕೇವಲ 60 ವರ್ಷಗಳಾಗಿದ್ದವು. ಈಗ ಅದು ಬದಲಾಗಿದೆ. ಶಿಶು ಮರಣದ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕಾಲದಲ್ಲಿ ಹಮ್ಮಿಕೊಂಡ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಈಗ ಫಲ ನೀಡುತ್ತಿದೆ. ಬೆಂಗಳೂರು ವಿಶ್ವದ ಐ.ಟಿ ಕೇಂದ್ರವಾಗಿದ್ದು, ಸಿಲಿಕಾನ್ ವ್ಯಾಲಿ ಎಂಬ ಹೆಸರು ಗಳಿಸಿರುವುದು ಇದೆಲ್ಲ ಸಾಧನೆ, ಅಭಿವೃದ್ಧಿಯಲ್ಲವೇ ಎಂದು ಅವರು ಪ್ರಶ್ನಿಸಿದರು.

*ಸ್ಕಿಲ್ ಡೆವಲಪ್‌ಮೆಂಟ್ ಸಮರ್ಪಕವಾಗಿ ನಡೆಯುತ್ತಿಲ್ಲ:
ದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಕಡಿಮೆ ವೆಚ್ಚದಲ್ಲಿ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಬಹುದಾದ ನಿರ್ಮಾಣ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಸ್ಯಾಮ್ ಹೇಳಿದರು.

ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ತಯಾರಿ ನಡೆಯಬೇಕಾಗಿದೆ ಎಂದು ಸ್ಯಾಮ್ ಪಿತ್ರೋಡ ನುಡಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಮುಖಂಡರಾದ ಮಂಜುನಾಥ ಭಂಡಾರಿ, ಸುರೇಶ್ ಶೆಟ್ಟಿ, ಮಧು ಯಾಸ್ಕಿ ಗೌಡ, ನವೀನ್ ಡಿಸೋಜ, ದ.ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News