ಬೇಡವೆಂದು ಗೋಗರೆದರೂ ಲಾಲೂ ಪ್ರಸಾದ್ ರನ್ನು ಬಿಡುಗಡೆಗೊಳಿಸಿದ ಆಸ್ಪತ್ರೆ!

Update: 2018-04-30 16:42 GMT

ಹೊಸದಿಲ್ಲಿ,ಎ.30: ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ಅವರು ಬಯಸಿರದಿದ್ದರೂ ಸೋಮವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದಕ್ಕೂ ಮುನ್ನ ಅವರು,ತನ್ನನ್ನು ಜಾರ್ಖಂಡ್‌ನ ರಾಂಚಿಗೆ ವಾಪಸ್ ಕಳುಹಿಸುವಷ್ಟು ತನ್ನ ಆರೋಗ್ಯ ಸುಧಾರಿಸಿಲ್ಲ ಎಂದು ಪತ್ರದಲ್ಲಿ ಹೇಳಿಕೊಂಡಿದ್ದರು. ಭ್ರಷ್ಟಾಚಾರವೆಸಗಿದ್ದಕ್ಕಾಗಿ ಅವರು ರಾಂಚಿ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಇದು ಅನ್ಯಾಯ.ಇದು ತನ್ನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ಪಿತೂರಿಯಾಗಿದೆ. ಯಾವುದೇ ಸೌಲಭ್ಯಗಳಿಲ್ಲದ ಆಸ್ಪತ್ರೆಗೆ ತನ್ನನ್ನು ಸ್ಥಳಾಂತರಿಸಲಾಗುತ್ತಿದೆ. ಇದೊಂದು ಕಠಿಣ ಸಮಯ,ಆದರೂ ತಾನು ಎದುರಿಸುತ್ತೇನೆ ಎಂದು ಲಾಲು(69) ಹೇಳಿದರು. ಮೇವು ಹಗರಣ ಪ್ರಕರಣಗಳಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಲಾಲುರನ್ನು ಮಾರ್ಚ್‌ನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ವಿಶೇಷ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು. ರಾಂಚಿಯಿಂದ 16 ಗಂಂಟೆಗಳ ರೈಲು ಪ್ರಯಾಣದ ಬಳಿಕ ಅವರು ದಿಲ್ಲಿ ತಲುಪಿದ್ದರು. ಅವರಿಗೆ ವಿಮಾನ ಪ್ರಯಾಣಕ್ಕೆ ಅನುಮತಿಯನ್ನು ನಿರಾಕರಿಸಲಾಗಿತ್ತು ಎಂದು ಆರ್‌ಜೆಡಿ ಆರೋಪಿಸಿದ್ದರಿಂದ ಅವರ ಈ ರೈಲು ಪ್ರಯಾಣ ವಿವಾದವನ್ನು ಸೃಷ್ಟಿಸಿತ್ತು.

‘‘ಈ ನಿರ್ಧಾರದಿಂದ ನನ್ನ ಜೀವಕ್ಕೇನಾದರೂ ಹಾನಿಯಾದರೆ ನೀವೇ(ಏಮ್ಸ್)ಹೊಣೆಯಾಗುತ್ತೀರಿ’’ಎಂದು ಲಾಲು ಪತ್ರದಲ್ಲಿ ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಏಮ್ಸ್‌ಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದರು.

ಲಾಲು ಯಾದವ್ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಯಾಗಿದೆ ಮತ್ತು ಅವರನ್ನು ರಾಂಚಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವಾಪಸ್ ಕಳುಹಿಸಲಾಗುತ್ತಿದೆ. ಅವರು ಪ್ರಯಾಣಕ್ಕೆ ಅರ್ಹರಾಗಿದ್ದಾರೆ ಎಂದು ಏಮ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತನ್ನ ಬಿಡುಗಡೆಗಾಗಿ ಆಸ್ಪತ್ರೆಯು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತನಗೆ ಮಾಹಿತಿ ನೀಡಲಾಗಿದೆ. ತನ್ನ ಆರೋಗ್ಯ ನಿಜಕ್ಕೂ ಸುಧಾರಿಸಿಲ್ಲ ಎಂದಿರುವ ಲಾಲು ಹೃದಯ,ಮೂತ್ರಪಿಂಡ ಮತ್ತು ಮಧುಮೇಹ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ತನ್ನ ಬೆನ್ನು ವಿಪರೀತ ನೋಯುತ್ತಿದೆ ಮತ್ತು ತಲೆಯೂ ತಿರುಗುತ್ತಿದೆ. ಬಾತ್‌ರೂಮಿನಲ್ಲಿ ತಾನು ಹಲವಾರು ಬಾರಿ ಬಿದ್ದಿದ್ದೇನೆ. ತನ್ನ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟ ಹೆಚ್ಚುತ್ತಲೇ ಇದೆ ಎಂದು ಲಾಲು ಗೋಳು ತೋಡಿಕೊಂಡಿದ್ದಾರೆ.

ಮೂತ್ರಪಿಂಡ ಸಂಬಂಧಿತ ಚಿಕಿತ್ಸೆಗೆ ಯಾವುದೇ ಸೌಲಭ್ಯಗಳು ರಾಂಚಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿಲ್ಲ ಎಂದು ಬೆಟ್ಟು ಮಾಡಿರುವ ಲಾಲು,ತನಗೆ ತೃಪ್ತಿಯಾಗುವ ಚಿಕಿತ್ಸೆಯನ್ನು ಪಡೆಯಲು ಪ್ರತಿ ಪ್ರಜೆಗೂ ಹಕ್ಕು ಇದೆ. ಯಾವುದೇ ಏಜೆನ್ಸಿ ಅಥವಾ ರಾಜಕೀಯ ಪಕ್ಷದ ಯಾವ ಒತ್ತಡದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನುವುದು ತನಗೆ ತಿಳಿದಿಲ್ಲ ಎಂದಿದ್ದಾರೆ. ವೈದ್ಯರು ದೇವರಿದ್ದಂತೆ ಮತ್ತು ಅವರು ಯಾವುದೇ ಒತ್ತಡಕ್ಕೂ ಮಣಿಯಬಾರದು ಎಂದು ತನ್ನ ಪತ್ರದಲ್ಲಿ ಆಗ್ರಹಿಸಿದ್ದ ಲಾಲು,ತಾನು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ತನ್ನನ್ನು ಏಮ್ಸ್‌ನಿಂದ ಬಿಡುಗಡೆಗೊಳಿಸಬಾರದು ಎಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News