ಉಡುಪಿ: ಚಿತ್ರಕಲೆ, ಫ್ಲಾಷ್ ಮಾಬ್ ಮೂಲಕ ಮತದಾನ ಜಾಗೃತಿ
ಉಡುಪಿ, ಎ.30: ರಾಜ್ಯ ವಿಧಾನಸಭಾ ಚುನಾವಣೆ ಅಂಗವಾಗಿ ಮೇ 12 ರಂದು ನಡೆಯುವ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಲ್ಪೆ ಕಡಲ ತೀರದಲ್ಲಿ ರವಿವಾರ ಸಂಜೆ ಚಿತ್ರಕಲೆ ಮತ್ತು ಪ್ಲಾಷ್ ಮಾಬ್ ಕಾರ್ಯಕ್ರಮದ ಮೂಲಕ ನೆರೆದಿದ್ದ ಸಾರ್ವಜನಿಕರಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಯಿತು.
ಉಡುಪಿಯ ದರ್ಪಣ ತಂಡದ ಸದಸ್ಯರು ಆಕರ್ಷಕ ನೃತ್ಯ ಮತ್ತು ಮತದಾನದ ಮಹತ್ವ ತಿಳಿಸುವ ಅಭಿನಯದ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಿದರು.ಇದೇ ಸಂದರ್ದಲ್ಲಿ ಮತದಾನ ಜಾಗೃತಿ ಕುರಿತು ಹವ್ಯಾಸಿ ಕಲಾವಿದರು ಚಿತ್ರಕಲೆಯನ್ನು ಬಿಡಿಸಿದರು.
ಚಿತ್ರಕಲೆ ಮತ್ತು ಪ್ಲಾಷ್ ಮಾಬ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಪೌರಾಯುಕ್ತ ಜನಾರ್ದನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.