ಕಣ್ಣೂರು: ಗಂಟೆಗಳ ಅವಧಿಯಲ್ಲಿ ಇಬ್ಬರ ಬರ್ಬರ ಹತ್ಯೆ

Update: 2018-05-08 05:46 GMT

ಕಾಸರಗೋಡು, ಮೇ 8: ಕಣ್ಣೂರಿನಲ್ಲಿ ಗಂಟೆಗಳ ಅವಧಿಯಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರಿಬ್ಬರನ್ನು ಬರ್ಬರವಾಗಿ ಕೊಲೆಗೈದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಕೆಲ ಸಮಯದ ಬಳಿಕ ಕಣ್ಣೂರಿನಲ್ಲಿ ಮತ್ತೆ ರಕ್ತದೋಕುಳಿ ಹರಿಯತೊಡಗಿದೆ.

ಸೋಮವಾರ ರಾತ್ರಿ ಪಲ್ಲೂರು ನಾಲತ್ತರ ಎಂಬಲ್ಲಿ ಸಿಪಿಎಂ ಕಾರ್ಯಕರ್ತರೋರ್ವರನ್ನು ವಾಹನದಲ್ಲಿ ಬಂದ ತಂಡವು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸಿಪಿಎಂ ಕಾರ್ಯಕರ್ತ ಬಾಬು(45) ಕೊಲೆಗೀಡಾದವರು.

ಈ ಕೊಲೆ ನಡೆದು ಗಂಟೆಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತ, ಆಟೋ ಚಾಲಕರೋರ್ವರನ್ನು ಕೊಲೆಗೈಯ್ಯಲಾಗಿದೆ. ಶನೋಜ್( 40) ಕೊಲೆಗೀಡಾದವರು.

ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ತೆರಳುತ್ತಿದ್ದ ಶನೋಜ್ ಅವರನ್ನು ಬೆನ್ನಟ್ಟಿ ಬಂದ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಶನೋಜ್ ಅವರನ್ನು ಕೋಝಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಕೊಲೆಗಿಡಾದ ಬಾಬು ಮಾಹೆ ನಗರಸಭೆಯ ಮಾಜಿ ಸದಸ್ಯರಾಗಿದ್ದರು.

ಕೊಲೆಗಳಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಿಪಿಎಂ ಮತ್ತು ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಈ ನಡುವೆ ಕೃತ್ಯವನ್ನು ಖಂಡಿಸಿ ಸಿಪಿಎಂ ಮತ್ತು ಬಿಜೆಪಿ ಕಣ್ಣೂರು ಮತ್ತು ಮಾಹೆಯಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.

ಕೊಲೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News