ಸಿದ್ದರಾಮಯ್ಯರಿಂದ ಕೊಲೆಗಡುಗರ ರಕ್ಷಣೆ: ಅಮಿತ್ ಶಾ ಆರೋಪ
ಮಂಗಳೂರು, ಮೇ 8: ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾತಾಳದಲ್ಲಿದ್ದರೂ ಕೊಲೆಗಡುಕರನ್ನು ಹುಡುಕಿ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ನಗರದ ನವಭಾರತ್ ವೃತ್ತದಿಂದ ಡೊಂಗರಕೇರಿ ಮೂಲಕ ಕಾರ್ಸ್ಟ್ರೀಟ್ ತನಕ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರೊಂದಿಗೆ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರಕಾರ ಅಭಿವೃದ್ಧಿ ವಿರೋಧಿ ಮತ್ತು ಗೂಂಡಾಗಿರಿಯ ಸರಕಾರ. ಕಾರ್ಯಕರ್ತರನ್ನು ಹತ್ಯೆ ಮಾಡಿದವರ ಬಂಧಿಸಲು ಅವರಿಗೆ ಸಾಧ್ಯ ವಾಗಿಲ್ಲ. ಮೇ 15ರಂದು ಸಿದ್ದರಾಮಯ್ಯ ಸರಕಾರ ಕೆಳಗಿಳಿಯಲಿದೆ. ಮೇ 16ರಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆಗಮನವಾಗಲಿದೆ. ಅಧಿಕಾರಕ್ಕೆ ಬಂದ ಬಳಿಕ ಕೊಲೆಗಡುಕರನ್ನು ಬಂಧಿಸುತ್ತೇವೆ ಎಂದರು.
ಅಮಿತ್ ಶಾ ರೋಡ್ ಶೋ
ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತದಿಂದ ಡೊಂಗರಕೇರಿ, ನ್ಯೂಚಿತ್ರಾ ಮೂಲಕ ಕಾರ್ಸ್ಟ್ರೀಟ್ ತನಕ ರೋಡ್ ಶೋ ನಡೆಯಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಉತ್ತರ ಪ್ರದೇಶದ ಸಚಿವ ಡಾ.ಮಹೇಂದ್ರ ಸಿಂಗ್ ಚೌಹಾಣ್, ಸಂಸದ ನಳಿನ್ ಕುಮಾರ್ ಕಟೀಲ್ ರೋಡ್ ಶೋಗೆ ನೇತೃತ್ವ ವಹಿಸಿದ್ದರು.