ಮೋದಿ ಅಲೆ ಆಸ್ತಿಯಲ್ಲ; ಹೊರೆ: ಗುಲಾಂ ನಬಿ ಆಝಾದ್
ಉಡುಪಿ, ಮೇ 9: 2014ರಲ್ಲಿ ಕಾಣಿಸಿಕೊಂಡ ಮೋದಿ ಅಲೆ ಎಂಬುದು ಇಂದು ಆಸ್ತಿಯಾಗಿಲ್ಲ, ಅದೊಂದು ಹೊರೆಯಾಗಿ ಪರಿಣಮಿಸಿದೆ ಎಂದು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಗುಲಾಂ ನಬಿ ಆಝಾದ್ ಅಭಿಪ್ರಾಯ ಪಟ್ಟಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಗುಲಾಂ ನಬಿ, ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಇಂದು ಪೊಳ್ಳು ಭರವಸೆ, ಒಣ ಸ್ಲೋಗನ್ ಹಾಗೂ ಪ್ರಚಾರಗಳಿಗೆ ಸೀಮಿತವಾಗಿದೆ. ಅಲ್ಲಿ ವಾಸ್ತವಗಳು ಕಾಣಿಸುವುದಿಲ್ಲ ಎಂದವರು ಹೇಳಿದರು. ವರ್ಷದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವ, ರೈತರ ಉತ್ಪಾದನಾ ವೆಚ್ಚದ ಕನಿಷ್ಠ ಶೇ. 50ನ್ನು ಬೆಂಬಲ ಬೆಲೆಯಾಗಿ ನೀಡುವ ಅವರ ಹೇಳಿಕೆಗಳೆಲ್ಲವೂ ಕೇವಲ ಘೋಷಣೆಯಾಗಿಯೇ ಉಳಿದುಕೊಂಡಿವೆ. ನಿಜವಾಗಿಯೂ ದೇಶದಲ್ಲಿ ಭಾರಿ ಸಂಖ್ಯೆಯ ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತಿದ್ದಾರೆ ಎಂದವರು ನುಡಿದರು.
ನರೇಂದ್ರ ಮೋದಿ ಸರಕಾರ ಯೋಜನೆಗಳನ್ನು ಘೋಷಣೆಗೆ ಸೀಮಿತಗೊಳಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೆ 2004ರಿಂದ 2014ರವರೆಗೆ ದೇಶದಲ್ಲಿ ಆಡಳಿತ ನಡೆಸಿದ್ದ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕಡಿಮೆ ಭರವಸೆ ನೀಡಿ, ಅದರ ದುಪ್ಪಟ್ಟು ಯೋಜನೆಗಳನ್ನು ಜಾರಿಗೊಳಿಸಿತ್ತು. ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತಾ ಯೋಜನೆ, ಆರ್ಟಿಐ, ಆರ್ಟಿಇಯಂಥ ಅತ್ಯಂತ ಪರಿಣಾಮಕಾರಿ ಯಾದ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಿದೆ ಎಂದರು.
ನರೇಗಾ ವಿಶ್ವದ ನಂ.1 ಯೋಜನೆ: ಯುಪಿಎ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆ ವಿಶ್ವದಲ್ಲಿ ನಂ.1 ಸಾಮಾಜಿಕ ಉದ್ಯೋಗ ಕಾರ್ಯಕ್ರಮವಾಗಿ ಪರಿಗಣಿಸಲ್ಪಟ್ಟಿದೆ. ಇದರಿಂದ ದೇಶದ 13 ಕೋಟಿ ಕುಟುಂಬಗಳು ಉದ್ಯೋಗವನ್ನು ಪಡೆದಿವೆ ಎಂದು ಗುಲಾಂ ನಬಿ ಆಝಾದ್ ನುಡಿದರು. ಆಹಾರ ಭದ್ರತಾ ಯೋಜನೆಯಿಂದ ದೇಶದ ಶೇ.65ರಷ್ಟು ಮಂದಿ ಪ್ರಯೋಜನ ಪಡೆಯುವಂತಾಯಿತು ಎಂದರು.
ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರಿಗೆ ಚಂದ್ರನನ್ನೇ ತರುವ ಭರವಸೆ ನೀಡಿ, ಹಿಡಿ ಮಣ್ಣನ್ನು ನೀಡಲು ವಿಫಲವಾಗಿದೆ. ರಾಷ್ಟ್ರಮಟ್ಟ ದಲ್ಲಿ ವಿಫಲವಾಗಿರುವ ಬಿಜೆಪಿ ಬಗ್ಗೆ ಕರ್ನಾಟಕದಲ್ಲೂ ಜನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ಪಕ್ಷ ಹಾಗೂ ಅದರ ನಾಯಕರಿಗೆ ಕರ್ನಾಟಕದ ಹಗರಣ ಮುಕ್ತ ಸಿದ್ದರಾಮಯ್ಯ ಸರಕಾರದ ಬಗ್ಗೆ ಹೇಳಿಕೆ ನೀಡುವ ನೈತಿಕತೆಯೇ ಇಲ್ಲವಾಗಿದೆ ಎಂದು ಅವರು ನುಡಿದರು.
ಸಿದ್ದರಾಮಯ್ಯ ಸರಕಾರ ಕಳೆದ ಐದು ವರ್ಷಗಳಲ್ಲಿ ತಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ರೈತರ ಸಾಲಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ ದಂಥ ಯೋಜನೆಗಳು ರಾಜ್ಯದ ಜನರನ್ನು ನೇರವಾಗಿ ತಲುಪಿವೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸ್ಪಷ್ಟವಾದ ಬಹುಮತದೊಂದಿಗೆ ಮತ್ತೆ ಆಡಳಿತಕ್ಕೆ ಬರಲಿದೆ. ಕರ್ನಾಟಕದೊಂದಿಗೆ ನನಗೆ ದೀರ್ಘಕಾಲದ ಅನುಭವದ ಆಧಾರದಲ್ಲಿ ನಾನು ಖಂಡಿತವಾಗಿ ಇಲ್ಲಿ ಅತಂತ್ರ ವಿಧಾನಸಭೆ ಖಂಡಿತ ಬರುವುದಿಲ್ಲ ಎಂದು ಖಚಿತವಾಗಿ ಹೇಳಬಲ್ಲೆ ಎಂದರು.
ಧರ್ಮವನ್ನು ರಾಜಕೀಯದ ಜೊತೆ ಬೆರೆಸುವುದು ಸರಿಯಲ್ಲ. ರಾಜಕೀಯ ಮತ್ತು ಧರ್ಮ ಬೇರೆ ಬೇರೆಯೇ ಇರಬೇಕು ಎಂದು ಕಾಂಗ್ರೆಸ್ ನಂಬಿದೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುತ್ತೇವೆ. ಆದರೆ ಧರ್ಮಕಾರಣವನ್ನು ಮಾಡುವುದಿಲ್ಲ ಎಂದರು. ಕರ್ನಾಟಕದ ಜನ ಬುದ್ಧಿವಂತರಿದ್ದಾರೆ. ಬಿಜೆಪಿ ಹೇಳುವುದೊಂದು ಮಾಡುವುದು ತದ್ವಿರುದ್ಧವಾದುದು ಎಂಬುದನ್ನು ಅನುಭವದಿಂದ ಬಲ್ಲರು. ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಪ್ರಧಾನಿ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುತ್ತಾರೆ. ಅವರ ಅಕ್ಕಪಕ್ಕದಲ್ಲಿರುವವರು ರೆಡ್ಡಿ ಸಹೋದರರು ಎಂದು ಲೇವಡಿ ಮಾಡಿದರು.
ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಎಂ.ಎ. ಗಫೂರ್, ನಾಗೇಶ್ ಉದ್ಯಾವರ, ಭಾಸ್ಕರ ರಾವ್ ಕಿದಿಯೂರು, ಡೊಮಿನಿಕ್ ಪ್ರಷಂಟೇಷನ್ ಹಾಗೂ ಇತರರು ಉಪಸ್ಥಿತರಿದ್ದರು.