ಚೆಕ್ಪೋಸ್ಟ್ನಲ್ಲಿ ಬಿಜೆಪಿ ಮುಖಂಡನ ಕಾರು ತಪಾಸಣೆ: ದಾಖಲೆ ಇಲ್ಲದ 2 ಲಕ್ಷ ರೂ., ಕರಪತ್ರ ವಶ
ಉಡುಪಿ, ಮೇ 10: ಸೂಕ್ತ ದಾಖಲೆ ಪತ್ರಗಳಿಲ್ಲದೇ ನಗದು ಮತ್ತು ಕರಪತ್ರ ಗಳನ್ನು ಸಾಗಾಟ ಮಾಡುತ್ತಿದ್ದ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಕಾರೊಂದನ್ನು ಬ್ರಹ್ಮಾವರ ಚೆಕ್ಪೋಸ್ಟ್ ಬಳಿ ಗುರುವಾರ ತಪಾಸಣೆ ನಡೆಸಿದ ಅಧಿಕಾರಿಗಳು ಅದರಲ್ಲಿದ್ದ 2 ಲಕ್ಷ ರೂ. ನಗದು ಹಾಗೂ ಕರಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಅಪರಾಹ್ನ 2:30ರ ಸುಮಾರಿಗೆ ಬ್ರಹ್ಮಾವರ ಕೃಷಿ ಕೇಂದ್ರ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳ ತಂಡ, ಬಿಜೆಪಿ ಮುಖಂಡ ರೊಬ್ಬರ ಕಾರನ್ನು ತಡೆದು ನಿಲ್ಲಿಸಿದ್ದು, ತಪಾಸಣೆ ವೇಳೆ ಕಾರಿನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕರಪತ್ರಗಳು ಹಾಗೂ 2 ಲಕ್ಷ ರೂ. ನಗದು ದೊರಕಿದೆ.
ಪ್ರೋಬೇಷನರಿ ಐಎಎಸ್ ಅಧಿಕಾರಿ ಪೂವಿತಾ ಮಾರ್ಗದರ್ಶನದಲ್ಲಿ ಪ್ಲೆಯ್ಯಿಂಗ್ ಸ್ಕ್ವಾಡ್ 1ರ ಅಧಿಕಾರಿ ಜಯರಾಜ್ ನೇತೃತ್ವದ ತಂಡ ತಪಾಸಣೆ ನಡೆಸಿದೆ. ಕಾರಿನಲ್ಲಿದ್ದ ನಗದು ಹಣಕ್ಕೆ ಸಂಬಂಧಿಸಿದಂತೆ ಮುಖಂಡರಲ್ಲಿ ಯಾವುದೇ ದಾಖಲೆ ಇಲ್ಲದಿರುವುದರಿಂದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.