×
Ad

ಬೈಕ್ ಮೇಲೆ ಮರ ಬಿದ್ದು ಸವಾರ ಮೃತ್ಯು

Update: 2018-05-13 00:01 IST

ಕುಂದಾಪುರ, ಮೇ 12: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮೇ 11ರಂದು ರಾತ್ರಿ ವೇಳೆ ಅಸೋಡು ಗ್ರಾಮದ ಫ್ಯಾಕ್ಟರಿ ಬಳಿ ನಡೆದಿದೆ.

ಮೃತರನ್ನು ವಕ್ವಾಡಿ ದೇವಾಡಿಗಬೆಟ್ಟು ನಿವಾಸಿ ಮಂಜುನಾಥ್ ದೇವಾಡಿಗ ಎಂಬವರ ಮಗ ರವಿ ದೇವಾಡಿಗ(27) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡುತ್ತಿದ್ದ ರವಿ ದೇವಾಡಿಗ, ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಕಾಳವಾರ ಪೇಟೆಗೆ ಹೋಗಿದ್ದರು.

ಅಲ್ಲಿಂದ ರಾತ್ರಿ 11ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಭಾರೀ ಗಾಳಿ ಮಳೆಯಿಂದಾಗಿ ಅಕೇಶಿಯಾ ಮರವೊಂದು ಚಲಿಸುತ್ತಿದ್ದ ಇವರ ಬೈಕ್ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ರವಿ ಮರದ ಅಡಿಯಲ್ಲೇ ಬಿದ್ದು ಮೃತಪಟ್ಟರು.

ನಿರ್ಜನ ಪ್ರದೇಶವಾಗಿರುವುದರಿಂದ ಈ ಘಟನೆ ಯಾರ ಗಮನಕ್ಕೂ ಬಂದಿ ರಲಿಲ್ಲ. ಬೆಳಗ್ಗೆ ಮರ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಬೈಕ್ ಬಿದ್ದಿ ರುವುದನ್ನು ನೋಡಿ ಮರದಡಿ ಪರಿಶೀಲಿಸಿದಾಗ ರವಿ ದೇವಾಡಿಗ ಅವರ ಮೃತ ದೇಹ ಪತ್ತೆಯಾಯಿತ್ತೆನ್ನಲಾಗಿದೆ.

ಮಂಜುನಾಥ್ ದೇವಾಡಿಗರ ಒಂದು ಹೆಣ್ಣು, ಮೂರು ಗಂಡು ಮಕ್ಕಳಲ್ಲಿ ರವಿ ದೇವಾಡಿಗ ಕೊನೆಯವರು. ಇವರು ಅವಿವಾಹಿತರಾಗಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News