ಕಡಬ: ರಿಕ್ಷಾ ಚಾಲಕನಿಗೆ ತಂಡದಿಂದ ಚೂರಿ ಇರಿತ
Update: 2018-05-13 10:13 GMT
ಕಡಬ, ಮೇ.13. ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಬರ್ಬರವಾಗಿ ಇರಿದು ಪರಾರಿಯಾದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿತ್ತಡ್ಕ ಎಂಬಲ್ಲಿ ರವಿವಾರ ಅಪರಾಹ್ನ ನಡೆದಿದೆ.
ಇರಿತಕ್ಕೊಳಗಾದ ರಿಕ್ಷಾ ಚಾಲಕನನ್ನು ಮರ್ಧಾಳ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಇವರು ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡವೊಂದು ಈ ಕೃತ್ಯ ಎಸಗಿದೆ. ತಂಡವು ರಿಕ್ಷಾವನ್ನು ಅಡ್ಡಗಟ್ಟಿದ್ದು, ಈ ವೇಳೆ ರಿಕ್ಷಾದಿಂದ ಇಳಿದ ಉಮೇಶ್ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಸುಮಾರು 200 ಮೀ. ದೂರ ಓಡಿದ್ದಾರೆ. ತಂಡವು ಅವರನ್ನು ಬೆನ್ನಟ್ಟಿ ನೆಕ್ಕಿತ್ತಡ್ಕ ದರ್ಗಾ ಬಳಿ ಇರಿದು ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.