ಸಂಜೀವ ಮಠಂದೂರು ಗೆಲುವು: ಪುತ್ತೂರಿನಲ್ಲಿ ವಿಜಯೋತ್ಸವ
Update: 2018-05-15 23:23 IST
ಪುತ್ತೂರು, ಮೇ 15: ಸಂಜೀವ ಮಠಂದೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುತ್ತೂರು ಪೇಟೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ವಿಜಯೋತ್ಸವ ಆಚರಿಸಿದರು.
ಇಲ್ಲಿನ ಕೋರ್ಟು ರಸ್ತೆಯಲ್ಲಿ ಪಟಾಕಿ ಸಿಡಿಸಿ ಹರ್ಷ ಆಚರಿಸಲಾಯಿತು. ಬಳಿಕ ಪುತ್ತೂರು ನಗರದ ಬಸ್ಸು ನಿಲ್ದಾಣದ ಬಳಿಯಲ್ಲಿರು ಗಾಂಧಿ ಕಟ್ಟೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಘೋಷಣೆ ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಳಿಕ ದರ್ಬೆಗೆ ಮೆರವಣಿಗೆಯಲ್ಲಿ ಸಾಗಿದರು. ಆದರೆ ಇಲ್ಲಿನ ಅರುಣಾ ಟಾಕೀಸ್ ಬಳಿಯಲ್ಲಿ ನಗರ ಠಾಣೆಯ ಶರಣ ಗೌಡ ಅವರು ನಿಷೇಧಾಜ್ಷೆ ಇರುವ ಕಾರಣ ಮೆರವಣಿಗೆ ನಡೆಸದಂತೆ ಕಾರ್ಯಕರ್ತರ ಮನವೊಲಿಸಿ ತಡೆದರು.
ಸಂಜೆ ವೇಳೆಗೆ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರಿಗೆ ಆಗಮಿಸಿದರು. ಅವರನ್ನು ಇಲ್ಲಿನ ಕಬಕ ಬಳಿಯಲ್ಲಿ ಕಾರ್ಯಕರ್ತರು ಹೂಹಾರ ದೊಂದಿಗೆ ಸ್ವಾಗತಿಸಿದರು. ಆ ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.