ಪ್ರತಿರೋಧದಿಂದ ಯಾವತ್ತೂ ಹಿಂದೆ ಸರಿಯುವುದಿಲ್ಲ : ರಿಯಾಝ್ ಫರಂಗಿಪೇಟೆ
ಬಂಟ್ವಾಳ, ಮೇ 15: ನಾವು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಪ್ರತಿರೋಧದಿಂದ ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ದ.ಕ. ಜಿಲ್ಲೆಯ ಆರೆರೆಸ್ಸ್ ಮತ್ತು ಬಿಜೆಪಿಗರು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ದ.ಕ. ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರು ಪದವು ಎಂಬಲ್ಲಿ ಬಿಜೆಪಿಯ ಕಾರ್ಯಕರ್ತರು ವಿಜಯೋತ್ಸವದ ನೆಪದಲ್ಲಿ ಪದೇ ಪದೇ ಮಸೀದಿಯ ಮುಂಭಾಗ ಬಂದು ಬೊಬ್ಬೆ ಹೊಡೆದು ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಲ್ಲದೆ, ಮಸೀದಿಯ ಮುಂಭಾಗದಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿ ರುತ್ತಾರೆ. ಇದನ್ನು ಆಕ್ಷೇಪಿಸಿದ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದಲ್ಲದೆ ಮಸೀದಿಗೆ ಹಾಗೂ ಸ್ಥಳೀಯ ಮನೆಗಳಿಗೆ ಕಲ್ಲು ತೂರಾಟ ಮಾಡಿ ತಮ್ಮ ಕ್ರೌರ್ಯವನ್ನು ಮೆರೆದಿರುತ್ತಾರೆ. ಬಿಜೆಪಿ ಪಕ್ಷವು ತನ್ನ ಗೆಲುವಿನ ಮೊದಲ ದಿನವೇ ಮುಸಲ್ಮಾನರನ್ನು ಬೆದರಿಸುವ ಕೆಲಸಕ್ಕೆ ಇಳಿದಿರುವುದನ್ನು ನೋಡಿದರೆ ಇವರಿಗೆ ಜನಸೇವೆ ಮಾಡುವುದಕ್ಕಿಂತ ಮುಸ್ಲಿಮರ ಮೇಲೆ ದ್ವೇಷ ಸಾಧಿಸುವುದೇ ಮುಖ್ಯವೆಂದು ಸಾಬೀತು ಪಡಿಸಿದ್ದಾರೆ ಎಂದು ಅವರು ದೂರಿದರು.
ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಇಂತಹ ಘಟನೆಗಳು ನಡೆದಿದೆ ಎಂದರೆ ಇಲ್ಲಿ ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವೈಫಲ್ಯವು ಎದ್ದು ಕಾಣುತ್ತಿದೆ. ಈ ಘಟನೆಗೆ ಸಂಬಂಧಿಸಿದ ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಇನ್ನು ಮುಂದೆಯು ಕೂಡಾ ಬಿಜೆಪಿಗರ ಗೂಂಡಾ ವರ್ತನೆಯು ಮರುಕಳಿಸುವ ಸಾಧ್ಯತೆ ಇದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.