ಮೂಡುಬಿದಿರೆ: ರಸ್ತೆ ಅಪಘಾತ; ಬೈಕ್ ಸವಾರರಿಗೆ ಗಂಭೀರ ಗಾಯ

Update: 2018-05-19 17:18 GMT

ಮೂಡುಬಿದಿರೆ, ಮೇ 19: ಜೀಪೊಂದು ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ರಾತ್ರಿ ಮೂಡುಬಿದಿರೆಯ ಗಾಂಧಿನಗರದಲ್ಲಿ ನಡೆದಿದೆ.

ಬೈಕ್ ಸವಾರ ಕಲ್ಲಮುಂಡ್ಕೂರಿನ ನಿವಾಸಿ ಆ್ಯಂಟನಿ (45) ಮತ್ತು ಕಾಪಿಕಾಡು ನಿವಾಸಿ ಅಶೋಕ್ (19) ಗಾಯಗೊಂಡವರು ಎಂದು ಗುರುತಿಸಲಾಗಿದೆ. ವಿದ್ಯಾಗಿರಿಯಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಕೇರಳ ಮೂಲದ ಸಾಜು ಕೆ. ಎಂಬವರ ಜೀಪು ಗಾಂಧಿನಗರದ ಬಳಿ ಒಂದು ಬೈಕ್‌ಗೆ ಢಿಕ್ಕಿ ಹೊಡೆದು ನಂತರ ನಿಯಂತ್ರಣಕ್ಕೆ ಸಿಗದೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕರು ಗಾಯಗೊಂಡಿದ್ದಾರೆ. 

ಈ ಸಂದರ್ಭ ಆ್ಯಂಟನಿ ಅವರ ತಲೆ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿವೆ. ಇನ್ನೊಂದು ಬೈಕ್ ಸವಾರ ಅಶೋಕ್ ಕಾಲಿನ ಮೂಳೆ ಮುರಿತಕ್ಕೊಳಗಾಗಿರುವುದಾಗಿ ತಿಳಿದುಬಂದಿದೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್, ಉಪನಿರೀಕ್ಷಕ ದೇಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಜೀಪು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News