×
Ad

ನಿಪ್ಹಾ ವೈರಸ್ ಮುನ್ನೆಚ್ಚರಿಕೆ ವಹಿಸಿ, ಗಾಬರಿ ಬೇಡ: ಉಡುಪಿ ಜಿಲ್ಲಾಧಿಕಾರಿ

Update: 2018-05-22 21:19 IST

ಉಡುಪಿ, ಮೇ 22: ನಿಪ್ಹಾ ವೈರಸ್‌ನಿಂದ ಹರಡುವ ಕಾಯಿಲೆ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಿಪ್ಹಾ ವೈರಸ್ ನಿಯಂತ್ರಣ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈಗಾಗಲೇ ಕೇರಳದ ಕ್ಯಾಲಿಕಟ್ ಮತ್ತು ಮಲಪ್ಪುರಂನಲ್ಲಿ ಈ ವೈರಸ್ ಕಾಣಸಿಕೊಂಡಿದ್ದು, ಸೋಂಕು ಹರಡಿದ 96 ಮಂದಿಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಬಾವಲಿಗಳು ಕಚ್ಚಿದ ಹಣ್ಣಿನಿಂದ ಈ ರೋಗ ಹರಡುತ್ತಿದ್ದು, ಮರದಿಂದ ಪಕ್ಷಿಗಳು ತಿಂದು ಕೆಳಗೆ ಬಿದ್ದ ಹಣ್ಣುಗಳನ್ನು ಯಾರು ಕೂಡ ಸೇವಿಸಬಾರದು ಎಂದು ಅವರು ಹೇಳಿದರು.

ಎಲ್ಲ ಹಣ್ಣುಗಳನ್ನು ಸ್ವಚ್ಛವಾಗಿ ತೊಳೆದು ಸೇವಿಸಬೇಕು ಹಾಗೂ ಸಾಧ್ಯವಾದಷ್ಟೂ ಹಣ್ಣುಗಳ ಸಿಪ್ಪೆತೆಗೆದು ಸೇವನೆ ಮಾಡಬೇಕು. ಕೈಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ನೀಡಬೇಕು ಎಂದು ಅವರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಪ್ಹಾ ವೈರಸ್ ಸೋಂಕು ತಗುಲಿದ ವ್ಯಕ್ತಿಯಲ್ಲಿ ಜ್ವರ, ತಲೆನೋವು, ವಾಂತಿ, ನಂತರ ಉಸಿರಾಟದ ತೊಂದರೆ ಹಾಗೂ ಮೆದುಳು ಜ್ವರ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಹರಡಿದ ವ್ಯಕ್ತಿಯ ದೇಹದಿಂದ ಹೊರಬರುವ ಎಂಜಲು ಮತ್ತಿತರ ದೇಹದ ದ್ರವ ಮತೊಬ್ಬರ ದೇಹಕ್ಕೆ ಸೇರಿದರೆ ರೋಗ ಹರಡುತ್ತದೆ. ಬಾವಲಿಗಳು ಕಚ್ಚಿರುವ ಹಣ್ಣಿನಿಂದ ಮಾತ್ರವಲ್ಲದೇ, ಅಂತಹ ಹಣ್ಣುಗಳನ್ನು ಸೇವಿಸುವ ಸಾಕು ಪ್ರಾಣಿಗಳಿಂದಲೂ ವೈರಸ್ ಹರಡುವ ಸಾಧ್ಯತೆ ಇದೆ. ಸಾಕು ಪ್ರಾಣಿಗಳಲ್ಲಿ ರೋಗ ಲಕ್ಷಣಗಳಿದ್ದಲ್ಲಿ ಪಶು ವೈದ್ಯರಿಂದ ಸೂಕ್ತ ಪರೀಕ್ಷೆ ಮಾಡಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನಿಪ್ಹಾ ವೈರಸ್ ಲಕ್ಷಣಗಳ ಕುರಿತು ಮಾಹಿತಿ ನೀಡಬೇಕು ಹಾಗೂ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಬೇಕು. ಐಎಂಎ ವತಿಯಿಂದ ಎಲ್ಲಾ ವೈದ್ಯರಿಗೆ ಖಾಯಿಲೆ ಹಾಗೂ ಪ್ರಮಾಣಿತ ಕಾರ್ಯ ವಿಧಾನ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಐಎಂಎ ಪ್ರತಿನಿಧಿಗಳು, ಆರೋಗ್ಯ ಇಲಾಖಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬರುವ ಸಂಶಯಾಸ್ಪದ ನಿಪ್ಹಾ ವೈರಸ್ ರೋಗಿಯ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಇಲಾಖೆಯ ವತಿಯಿಂದ ಖಾಸಗಿ/ಸರಕಾರಿ ಆಸ್ಪತ್ರೆ ಗಳಿಗೆ ಲಕ್ಷಣ/ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಕ್ರಮ ವಹಿಸಬೇಕು. ಸೂಕ್ತ ಪರೀಕ್ಷಾ ಉಪಕರಣಗಳು ಮತ್ತು ವೈದ್ಯರು ಮತ್ತು ಶುಶ್ರೂಶಕ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸ ಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಜಿಲ್ಲಾ ಸರ್ಜನ್ ಹಾಗೂ ಖಾಸಗಿ ಆಸ್ಪತ್ರೆ ಸಂಘದ ಅಧ್ಯಕ್ಷರಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News