ಆರೋಗ್ಯ ಸೇವೆಗಳ ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ ವೈದ್ಯ
Update: 2018-05-24 20:19 IST
ಪಣಜಿ,ಮೇ 24: ಗೋವಾ ಆರೋಗ್ಯ ಸೇವೆಗಳ ನಿರ್ದೇಶಕ ಡಾ.ಸಂಜೀವ ದಳವಿ ಅವರ ಮೇಲೆ ಗುರುವಾರ ವೈದ್ಯರೋರ್ವರು ಮೊಂಡಾದ ಆಯುಧದಿಂದ ಹಲ್ಲೆ ನಡೆಸಿದ್ದು,ಗಾಯಗೊಂಡಿರುವ ಅವರನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯ ಕಂಪಾಲ್ನಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯದಲ್ಲಿನ ಡಾ.ದಳವಿಯವರ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಡಾ.ವೆಂಕಟೇಶ ಅವರನ್ನು ಆರೋಪಿಯೆಂದು ಪೊಲೀಸರು ಹೆಸರಿಸಿದ್ದಾರೆ. ಅವರು ಕಾಣಕೋಣದಲ್ಲಿ ಮೂತ್ರಪಿಂಡ ಡಯಾಲಿಸಿಸ್ ಕೇಂದ್ರವನ್ನು ಹೊಂದಿದ್ದು, ಆರೋಗ್ಯ ಸೇವೆಗಳ ನಿರ್ದೇಶನಾಲಯವು ಅದಕ್ಕೆ ಹೊರಗುತ್ತಿಗೆಯನ್ನು ನೀಡಿದೆ.
ತನ್ಮಧ್ಯೆ ಪಣಜಿ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವೆಂಕಟೇಶ ಅವರು,ತನಗೆ ಬರಬೇಕಾಗಿರುವ ಲಕ್ಷಾಂತರ ರೂ.ಗಳ ಬಾಕಿಯನ್ನು ತಡೆಹಿಡಿದಿದ್ದಕ್ಕಾಗಿ ತಾನು ಡಾ.ದಳವಿಯರ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದರು.
ಈ ಬಗ್ಗೆ ಪಣಜಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.