ಕಾಸರಗೋಡು: ಮಲಯಾಳ ಕಡ್ಡಾಯ ಆದೇಶದ ವಿರುದ್ಧ ಕನ್ನಡ ಹೋರಾಟ ಸಮಿತಿಯಿಂದ ಧರಣಿ
ಕಾಸರಗೋಡು, ಮೇ 28: ಮಲಯಾಳ ಕಡ್ಡಾಯ ಆದೇಶದ ವಿರುದ್ಧ ಕನ್ನಡ ಹೋರಾಟ ಸಮಿತಿ ವತಿಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ನಡೆಯುತ್ತಿರುವ ಧರಣಿ ಮತ್ತು ಸಹಿ ಸಂಗ್ರಹ ಅಭಿಯಾನ ಸೋಮವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು , ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸೋಮವಾರ ಸಿರಿ ಚಂದನ ಕನ್ನಡ ಯುವ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಆರನೇ ದಿನದ ಪ್ರತಿಭಟನೆಯನ್ನು ಕನ್ನಡ ಹೋರಾಟ ಗಾರ ಬಿ . ಪುರುಷೋತ್ತಮ ಉದ್ಘಾಟಿಸಿದರು. ಹೋರಾಟ ಸಮಿತಿ ಸಂಚಾಲಕ ನ್ಯಾಯವಾದಿ ಮುರಳೀಧರ ಬಳ್ಳುಕ್ಕರಾಯ, ಅಡೂರು ಉಮೇಶ್ ನಾಯ್ಕ್ , ರಾಧಾಕೃಷ್ಣ ಉಳಿಯತ್ತಡ್ಕ , ತಾರಾನಾಥ ಮಧೂರು , ಪ್ರೊ. ಎ . ಶ್ರೀನಾಥ್ , ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ .ಎಸ್ , ಉಪಾಧ್ಯಕ್ಷ ಪ್ರಶಾಂತ್ ಹೊಳ್ಳ , ಕಾರ್ಯದರ್ಶಿ ರಾಜೇಶ್ ಎಸ್ .ಪಿ , ಸೌಮ್ಯ ಪ್ರಸಾದ್ , ಸ್ವಾತಿ ಸರಳಿ, ಶ್ರದ್ದಾ ಭಟ್ ನಾಯರ್ಪಳ್ಳ, ಸ್ವಾತಿ , ವಿಶಾಲಾಕ್ಷಿ ಸುಜಿತ್ ಉಪ್ಪಳ , ಮೇಘಶ್ರೀ , ಸುಜಾತಾ ಸಿ ಎಚ್ ಮೊದಲಾದವರು ನೇತೃತ್ವ ನೀಡಿದರು.
ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹರಂಗ , ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಗಿಳಿವಿಂಡು , ವಿದ್ಯಾನಗರ ಚಾಲದ ಬಿ. ಎಡ್ ಕಾಲೇಜಿನ ವಿದ್ಯಾರ್ಥಿಗಳು , ಮಾಯಿಪ್ಪಾಡಿ ಡಯಟ್ ವಿದ್ಯಾರ್ಥಿಗಳು , ಸ್ನಾತಕೋತ್ತರ ವಿದ್ಯಾರ್ಥಿಗಳು , ಕಾಸರಗೋಡು ಸರಕಾರಿ ಕಾಲೇಜಿನ ಎಂ . ಫಿಲ್ , ಪಿ . ಎಚ್ ಡಿ, ಸಂಶೋಧನಾ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶಿಸಿದರು.
ಮೇ 23 ರಿಂದ ಕಾಸರಗೋಡು ಹೊಸಬಸ್ಸು ನಿಲ್ದಾಣ ಪರಿಸರದಲ್ಲಿ ಆರಂಭಗೊಂಡ ಧರಣಿ ಯಲ್ಲಿ ಈಗಾಗಲೇ ಹಲವಾರು ಮಂದಿ ಭಾಗಿಯಾಗಿದ್ದು , ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ . ವಿವಿಧ ಪಕ್ಷದ ಪ್ರತಿನಿಧಿಗಳು , ಕನ್ನಡ ಹೋರಾಟಗಾರರು ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದ್ದಾರೆ. ಧರಣಿ ಮಂಗಳವಾರ ಕೊನೆಗೊಳ್ಳಲಿದೆ.